Saturday, February 8, 2020

ಇಗೋ ,ಹಿಂದೆ ಸರಿಯುತ್ತಿದ್ದೇನೆ . ಹೌದಪ್ಪಾ ಮರೀ,ನೀನೆನ್ನುವುದೇ ಸರೀ ಕುಣಿದೂ,ಕುಣಿದೂ ದಣಿದಿದೆಕಾಲು.ಕಿರಿಯರಿಗೆ ಜಾಗಬಿಟ್ಟು,ರಂಗಸ್ಥಳದಿಂದ ಕೆಳಗಿಳಿದು,ಪರದೆ ಹಿಂದೆ ಸರಿಯುವುದೇ ಮೇಲು !ಕರಗಿದೆ ಮುಖಕ್ಕೆ ಹಚ್ಚಿದ ರಂಗು !ಮತ್ತೇಕೆ ನನಗೆ ಥಳಕು ಬೆಳಕಿನಾ ಹಂಗು.?ಕಳಚಿ ಬಿದ್ದಿವೆ, ಭುಜಕೀರ್ತಿ ಕಿರೀಟ.ತಣ್ಣಗಾಗಿವೆ ಕತ್ತಿ ಗಧೆಗಳ ಆರ್ಭಟ! ತಾಳ ತಪ್ಪಿ ಕುಣಿದಿದ್ದೇನೆ !ನಾನೇ ಸರಿ ಎನ್ನುತ್ತಾ,ಅಹಂಕಾರದಲಿ ಮೆರೆದಿದ್ದೇನೆ!ಚಂಡೆ ಮದ್ದಳೆ ದನಿಗೆಕಿವಿ ಕಿವುಡಾಗಿದೆ !ಝಗಮಗಿಸುವ ದೀಪದ ಬೆಳಕಿಗೆ,ಕಣ್ಣು ಕುರುಡಾಗಿದೆ !ಪ್ರಸ್ಥಾನ ಗೀತೆ ಕೇಳಿಬರುತ್ತಿದೆ.ಅಸ್ತಮಿಸುವ ಸೂರ್ಯನೊಡನೆ ನಾನೂ ತೆರಳುತ್ತಿದ್ದೇನೆ !ನಾಳೆ ಮತ್ತೆಲ್ಲೋ....,ಬಾಲ ರವಿಯ ಜೊತೆಮತ್ತೆ ಉದಯಿಸುತ್ತೇನೆ!ಹೊಸ ಬಾಳ ರಂಗಸ್ಥಳದಲ್ಲಿಮತ್ತೊಮ್ಮೆ ಗೆಜ್ಜೆ ಕಟ್ಟಿ,ಹೆಜ್ಜೆ ಹಾಕುತ್ತೇನೆ !!( ಯಾವುದೋ ಹಳೆಯ ಪುಸ್ತಕವೊಂದರಲ್ಲಿ ಬರೆದಿಟ್ಟು ಮರೆತ ನನ್ನ ಕವಿತೆ😊)


Monday, May 16, 2016

MY HEART DID A "JIG" !!!!!! :-)
------------------------------
Yesterday evening I had a very pleasant surprise of my life which I never had before . My heart did a 'jig' , a 'Bhangra', a 'Bharata natyam' !!!!! All put together !!!!! It was a unique experience and I want to share it with all my friends. I have been teaching KANNADA to non kannadiga's of our gated community since about a couple of months. I am amazed at their interest in learning and their speed in learning. Yesterday they were able to read about 50 difficult kannada words!!!! one of the students who happens to be the president of our association gave me a ring in the evening and asked me if he can meet me in my house for a couple.of minutes.I thought he wants to discuss some problems of the residents. No , I was wrong !!!!! Totally wrong !!!! He came in with a paper bag containing a very beautiful PETER ENGLAND SHIRT of my size costing around a thousand rupees .!!!!! I was speechless when he said " it is a small token of respect for the teacher in you !!!! " After he left , I kissed the bag with the shirt and my eyes blurred with tears of joy overflowing !!!!! 

Saturday, April 9, 2016

" ಇಂಥವರು ಈಗಲೂ ಇದ್ದಾರೆ !!!!! "
----------------------------------------

ಮೊನ್ನೆ ಯುಗಾದಿ ಹಬ್ಬದ ಹಿಂದಿನ ದಿನ ರಾತ್ರಿ ಆರ್. ಟಿ. ನಗರದ ಮಾರ್ಕೆಟ್ಟಿನ ಅಂಗಡಿಯೊಂದರಲ್ಲಿ  ವಿಜಯವಾಣಿಯ ಯುಗಾದಿ ವಿಶೇಷಾಂಕವನ್ನು ಖರೀದಿಸಿದೆ. ಅದರ ಬೆಲೆ 50 ರೂಪಾಯಿ. ನಾನು ಅಂಗಡಿಯವನಿಗೆ  ನೂರು ರೂಪಾಯಿ ಕೊಟ್ಟು , ಪುಸ್ತಕ ತೆಗೆದು ಕೊಂಡು ,ಬಾಕಿ ಐವತ್ತು ರೂಪಾಯಿಗಳನ್ನು ತೆಗೆದು ಕೊಳ್ಳುವುದನ್ನು ಮರೆತು ಮುಂದೆ ಹೋದೆ. ಬಾಕಿ ಹಣದ ವಿಷಯ ಮರೆತೇ ಹೋಗಿತ್ತು . ಸುಮಾರು ದೂರ ಹೋಗಿ  ಮತ್ಯಾವುದೋ ಅಂಗಡಿಯಲ್ಲಿ ಇನ್ನೇನೋ ಖರೀದಿಸುತ್ತಿದ್ದೆ.ಹಿಂದಿನಿದ ಯಾರೋ ಬೆನ್ನು ತಟ್ಟುತ್ತಿದ್ದರು. ಹಿಂದಿರುಗಿ ನೋಡಿದರೆ ಪುಸ್ತಕದ ಅಂಗಡಿಯವನು !!!!! ನನ್ನ ಬಾಕಿ ಐವತ್ತು ರೂಪಾಯಿಗಳನ್ನು ಹಿಂದಿರುಗಿಸಲು ನನ್ನನ್ನು ಹುಡುಕಿಕೊಂಡು ಸುಮಾರು ದೂರ ಬಂದಿದ್ದ.!!!! "ಅಲ್ಲಪ್ಪಾ , ಈಗಿನ ಕಾಲದಲ್ಲೂ  ನಿಮ್ಮಂಥಾ  ಪ್ರಾಮಾಣಿಕರು ಇದ್ದಾರಲ್ಲಾ !!!! " ಎಂದು ಆಶ್ಚರ್ಯದಿಂದ ಉದ್ಗರಿಸಿದೆ. ಅಂಗಡಿಯವನು ಏನೂ ಹೇಳದೆ ನಕ್ಕು  ಹಣ ಕೊಟ್ಟು ಹೋದ. ಇಂಥವರ ಸಂಖ್ಯೆ ಸಾವಿರವಾಗಲಿ ಎಂದು ಹಾರೈಸಿ ಎಂದು ಅವನಿಗೆ ಕೈ ಮುಗಿದೆ!!!!!!

Tuesday, May 12, 2015

"ಯಾಕೋ ......,ಸುಸ್ತು !!! "

ಕೆಲವರಿಗೆ ಯಾಕೋ ಸದಾ ಸುಸ್ತು !!!!! ದೈಹಿಕವಾಗಿ ಅಂತಹ ಶ್ರಮ ಇರುವುದಿಲ್ಲ!!!!! ಕೆಲವರ ಕುಡಿದ ನೀರೂ ಅಲ್ಲಾಡಿರುವುದಿಲ್ಲ !!!! ಕೈಗೊಬ್ಬ ಕಾಲಿಗೊಬ್ಬ ಆಳು !!!! ಆದರೂ ಸದಾ ಸುಸ್ತು !!!! ಕಂಡ ಕಂಡ ಡಾಕ್ಟರು ಗಳಿಗೆ ತೋರಿಸಿರುತ್ತಾರೆ !!!! ದುಬಾರಿ ಬೆಲೆಯ ಸಾಕಷ್ಟು ವಿಟಮಿನ್ ಮಾತ್ರೆ ಗಳನ್ನೂ ನುಂಗಿರುತ್ತಾರೆ !!! ಪದೇ ,ಪದೇ ಎಲ್ಲಾ ಟೆಸ್ಟ್ ಮಾಡಿಸಿರುತ್ತಾರೆ !!!ಎಲ್ಲಾ ಟೆಸ್ಟು ನಾರ್ಮಲ್ !!!! ಹೇಳಿಕೊಳ್ಳು ವಂಥ ಯಾವುದೇ ದೈಹಿಕ ಖಾಯಿಲೆಗಳಿರುವುದಿಲ್ಲ!!!ಆದರೆ ಮನಸ್ಸಿನಲ್ಲಿ ಸದಾ ಕಿರಿಕಿರಿ !!! ಮನಸ್ಸಿಗೆ ಸದಾ ,ಯಾವುದೋ ಒಂದು ಅಥವಾ ಯಾರೋ ಒಬ್ಬರು ಸರಿ ಇಲ್ಲ ಅಂತ ಅನಿಸುತ್ತಿರುತ್ತದೆ!!!! 'ಎಲ್ಲವೂ ತಮ್ಮ ಮೂಗಿನ ನೇರಕ್ಕೇ ನಡೆಯುವುದಿಲ್ಲ,ಜಗತ್ತು ಇರುವುದೇ ಹೀಗೆ ' ಎಂದು ಮನಸ್ಸು ಒಪ್ಪಿಕೊಳ್ಳಲು ತಯಾರಿರುವುದಿಲ್ಲ!!!! ಇಂಥವರು ಮನಸ್ಸಿನಿಂದ ಇಲ್ಲ ಸಲ್ಲದ ನೆಗೆಟಿವ್ ಆಲೋಚನೆಗಳನ್ನು Delete ಮಾಡಿ, ಧ್ಯಾನ,ಪ್ರಾಣಾಯಾಮಗಳಿಂದ ಮನಸ್ಸನ್ನು ಶಾಂತವಾಗಿ, ಸಮಾಧಾನದಿಂದ ಇಟ್ಟುಕೊಳ್ಳುವುದನ್ನು ರೂಢಿ ಮಾಡಿಕೊಂಡರೆ ಸುಸ್ತು ಕಮ್ಮಿ ಆಗಬಹುದು ಅನಿಸುತ್ತದೆ. ಇಲ್ಲದಿದ್ದರೆ ಹುಚ್ಚು ಕುದುರೆಯ ನಾಗಾಲೋಟದ ವೇಗದ ಮನಸ್ಸು ಯಾವುದಾದರೂ ದೊಡ್ಡ ದೈಹಿಕ ಖಾಯಿಲೆಗೆ ಕಾರಣವಾಗಬಹುದು !!!!
MOVE THE BODY AND REST THE MIND !!!!!! ಸರ್ವೇ ಜನಾಹ ಸುಖಿನೋ ಭವಂತು .ನಮಸ್ಕಾರ _/\_


Tuesday, April 7, 2015

"ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲೇ ಇದೆ !!!! "

 ಇಂದು ವಿಶ್ವ ಆರೋಗ್ಯ ದಿನ.ಆರೋಗ್ಯವೆನ್ನುವುದು ನಮ್ಮ ಸಹಜ ಸ್ಥಿತಿ.ಅನಾರೋಗ್ಯ ನಮ್ಮ ತಪ್ಪು ಜೀವನ ಶೈಲಿಯಿಂದ,ಸರಿ ಇಲ್ಲದ ಆಹಾರ ಪದ್ಧತಿಯಿಂದ ಹಾಗೂ ಸಾಕಷ್ಟು ದೈಹಿಕ ವ್ಯಾಯಾಮ ಇಲ್ಲದಿರುವುದರಿಂದ ಬರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಬಳಸಬೇಕು.ಎಷ್ಟೇ ಕಷ್ಟವಾದರೂ ಕನಿಷ್ಠ ಅರ್ಧ ಗಂಟೆ ನಡೆಯುವುದೋ ಅಥವಾ ಇನ್ನಿತರ ದೈಹಿಕ ವ್ಯಾಯಾಮದಲ್ಲಿ ನಮ್ಮನ್ನು ತೊಡಗಿಸಿಕೊಳ್ಳಬೇಕು.


ಹೋದ ವರ್ಷ ಜೂನ್ ತಿಂಗಳಲ್ಲಿ ,ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಈ ಮಳೆಯಲ್ಲಿ ಎಲ್ಲಿ ವಾಕಿಂಗ್ ಹೋಗೋದು ಸರ್?'ಎಂದರು.'ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದೂ ಸೇರಿಸಿದರು!ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್'ಎಂದರು.
ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.
ಅವರ ಈ ಮಾತುಗಳು ನನ್ನನ್ನು ಯೋಚಿಸುವಂತೆ ಮಾಡಿತು.'ನಾವು ಯಾವ ಸ್ಥಿತಿಗೆ ಬಂದು ನಿಂತಿದ್ದೇವೆ!'ಎನಿಸಿತು.ಔಷದ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'ಎನಿಸಿತು.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?
'what is used less and less ultimately becomes useless' ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಸ್ವಲ್ಪ ಯೋಗ ಮತ್ತು ಪ್ರಾಣಾಯಾಮವನ್ನು ಕಲಿತರೆ ಆರೋಗ್ಯಕ್ಕೆ ಇನ್ನೂ ಒಳಿತು.ಸರಿಯಾದ ಆಹಾರ,ಆರೋಗ್ಯಕರ ವಿಚಾರಗಳು  ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

ಆರೋಗ್ಯವೆನ್ನುವುದು  ನಮ್ಮೆಲ್ಲರ ಸಹಜ ಸ್ಥಿತಿ.ಅದು ನಮ್ಮೆಲ್ಲರ ಜನ್ಮಸಿದ್ಧ ಹಕ್ಕು. ಈ ವಿಶ್ವ ಆರೋಗ್ಯ ದಿನದಂದು ಎಲ್ಲರಿಗೂ ಸಮೃದ್ಧಿಯಾಗಿ ಆರೋಗ್ಯ ಭಾಗ್ಯ ಲಭ್ಯವಾಗಲೆಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.ನಮಸ್ಕಾರ.

Monday, March 30, 2015

"ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

Friday, March 20, 2015

"ಯಾರೋ ಹೇಳಿದ್ರು ಅಂತ...."

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Sunday, February 1, 2015

"ಒಲುಮೆಯ ಹೂವೇ........"

ಕೆಲವು ಹಾಡುಗಳು ಹೇಗೋ ಕೆಲವೊಂದು ನೆನಪು ಗಳಿಗೆ ತಳುಕು ಹಾಕಿ ಕೊಂಡು ಬಿಟ್ಟಿರುತ್ತವೆ.ಆ ಹಾಡನ್ನು ನೆನಸಿಕೊಂಡರೆ ಒಬ್ಬ ವ್ಯಕ್ತಿಯ ನೆನಪೋ ಅಥವಾ ,ಒಂದು ಪ್ರಸಂಗದ ನೆನಪೋ ಮರುಕಳಿಸಿಬಿಡುತ್ತದೆ.ನನ್ನ ನೆನಪಿನಲ್ಲಿ ಉಳಿದು ಹೋದಂತಹ ಇಂತಹುದೇ ಒಂದು ಹಾಡು ,ಕನ್ನಡದ ಮಹಾನ್ ಗಾಯಕ ಡಾ.ಪಿ.ಬಿ.ಶ್ರೀನಿವಾಸರು ಅರವತ್ತರ ದಶಕದ ಮೊದಲ ಭಾಗದಲ್ಲಿ 'ಪುನರ್ಜನ್ಮ 'ಎನ್ನುವ ಚಿತ್ರಕ್ಕೆ ಹಾಡಿದ 'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೆ' ಎನ್ನುವ ಹಾಡು.ಮೊದಲಿನಿಂದಲೂ ಈ ಹಾಡು ನನಗೆ ಅತ್ಯಂತ ಪ್ರಿಯವಾದ ಹಾಡು.ಅದೆಷ್ಟು ಸಲ ಈ ಹಾಡನ್ನು ಹಾಡಿದ್ದೇನೋ ತಿಳಿಯದು.ಈಹಾಡುನೆನಪಾದಾಗಲೆಲ್ಲಾ ನನ್ನ ಬಹಳ ಆತ್ಮೀಯ ಸ್ನೇಹಿತರೊಬ್ಬರು ನೆನಪಾಗಿ ಬಿಡುತ್ತಾರೆ.ಅವರ ಪರಿಚಯವಾದದ್ದೂ ಒಂದು ವಿಚಿತ್ರ ಸನ್ನಿವೇಶದ ಮೂಲಕ.
ಈಗ ಸುಮಾರು ಹನ್ನೆರಡು ವರ್ಷಗಳ ಹಿಂದೆ ನಡೆದ ಘಟನೆ.ನಾನು ಇ .ಎನ್.ಟಿ.ತಜ್ಞ ವೈದ್ಯಕೀಯ ಶಿಕ್ಷಣ ಮುಗಿಸಿದ ಹೊಸತು.ನನ್ನ ಬಳಿಗೆ ಕಿವಿಯ ಸೋರಿಕೆಯಿಂದ ಎಡ ಕಿವಿ ಕೇಳದ, ಏಳನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಬರುತ್ತಿದ್ದ.ಒಂದು ದಿನ ಬೆಳಿಗ್ಗೆ ಆ ಹುಡುಗ  ತನ್ನ ಬಲಗಿವಿ ವಿಪರೀತ ನೋವೆಂದೂ,ಈಗ ಅದೂ ಕೆಳುತ್ತಿಲ್ಲವೆಂದೂ ,ಕೈಯಿಂದ ಬಲಗಿವಿ ಮುಚ್ಚಿಕೊಂಡು ಅಳುತ್ತಾ ಬಂದ.ಅವನ ತಂದೆಯೂ ಅವನ ಜೊತೆಗೇ ಬಂದಿದ್ದರು.ಅವನ ಬಲಗಿವಿ ಪರೀಕ್ಷೆ ಮಾಡಿದಾಗ ಕಿವಿಯ ಪರದೆಯ ಹರಿದ ಭಾಗದಿಂದ ರಕ್ತ ಬರುತ್ತಿತ್ತು.ಕಿವಿಗೆ ಬಲವಾದ ಪೆಟ್ಟು ಬಿದ್ದದ್ದು ಖಾತ್ರಿ ಯಾಯಿತು.ಯಾರೋ ಜೋರಾಗಿ ಕಪಾಳಕ್ಕೆ ಹೊಡೆದಿದ್ದರು.ಆ ಭಾಗವೆಲ್ಲಾ ಹೊಡೆತದಿಂದ ಕೆಂಪಾಗಿತ್ತು.ನನಗೆ ಅವನ ತಂದೆಯ ಮೇಲೆಯೇ ಅನುಮಾನವಿತ್ತು.
ಬಹಳ ಬಲವಂತ ಮಾಡಿದ ಮೇಲೆ ಅವನ ತಂದೆ ಆ ಹುಡುಗನ ಮಾಸ್ತರರೊಬ್ಬರು ಕಪಾಳಕ್ಕೆ ಹೊಡೆದರೆಂದೂ,ಅದಕ್ಕೇ
ಹೀಗಾಯಿತೆಂದೂ ಹೇಳಿದ.ಮೊದಲೇ ಹುಡುಗನಿಗೆ ಒಂದು ಕಿವಿ ಕೇಳುತ್ತಿರಲಿಲ್ಲ.ಈಗ ಕಪಾಳಕ್ಕೆ ಹೊಡೆದು ಇನ್ನೊಂದು ಕಿವಿಯೂ ಕೇಳದ ಹಾಗೆ ಮಾಡಿ ಬಿಟ್ಟರಲ್ಲಾ ಎಂದು ನನಗೆ ಆ ಮಾಸ್ತರರ ಮೇಲೆ ವಿಪರೀತ ಸಿಟ್ಟು ಬಂತು.ಆ ಮಾಸ್ತರರನ್ನು ನನ್ನ ಬಳಿಗೆ ಕಳಿಸುವಂತೆ ಹೇಳಿದೆ.ಅದಕ್ಕೆ ಅವನ ತಂದೆ 'ಬಿಡಿ ಸಾರ್.ಇದನ್ನ ದೊಡ್ಡ ವಿಷಯ ಮಾಡಬೇಡಿ.ಆ ಮಾಸ್ತರರು ತುಂಬಾ ಒಳ್ಳೆಯವರು.ಇವನೇ ಏನೋ ಮಾಡಬಾರದ ತೀಟೆ ಮಾಡಿರುತ್ತಾನೆ.ಅದಕ್ಕೇ ಅವರು ಏಟು ಕೊಟ್ಟಿದ್ದಾರೆ,ನೀವೇ ಏನಾರ ಔಷಧಿ ಕೊಟ್ಟು ಸರಿ ಮಾಡಿಬಿಡಿ 'ಎಂದ.ನಾನೂ ಸುಮ್ಮನಾದೆ.
ಈ ಘಟನೆ ನಡೆದ ಎರಡು ದಿನಕ್ಕೆ ಒಬ್ಬ ವ್ಯಕ್ತಿ ನನ್ನ ರೂಮಿನ ಹೊರಗೆ ನಿಂತು 'ಒಳಗೆ ಬರಬಹುದಾ ಸರ್'ಎಂದರು . 'ಬನ್ನಿ 'ಎಂದೆ.ಒಳಗೆ ಬಂದು ಕೂತರು.ಮುಖ ಆತಂಕದಿಂದ ಬೆವರುತ್ತಿತ್ತು.ದನಿ ನಡುಗುತ್ತಿತ್ತು.ತಮ್ಮ ಹೆಸರು ಹೇಳಿ ಪರಿಚಯ ಮಾಡಿಕೊಂಡು 'ಬಿ.ಪಿ.ಚೆಕ್ ಮಾಡಿಸ್ಕೋ ಬೇಕಾಗಿತ್ತು ಸರ್ 'ಎಂದರು.ಬಿ.ಪಿ.ಸುಮಾರಾಗಿಯೇ ಜಾಸ್ತಿ ಇತ್ತು.'ಸಾರ್ ನಾನು ಇಲ್ಲಿ ಮಿಡ್ಲ್ ಸ್ಕೂಲ್ ಮೇಷ್ಟ್ರು.ನನ್ನಿಂದ ಬಹಳ ದೊಡ್ಡ ತಪ್ಪಾಯಿತು.ಕ್ಷಮಿಸಿ ಬಿಡಿ ಸರ್ 'ಎಂದರು.ನಾನು 'ಯಾಕ್ರೀ ಮೇಷ್ಟ್ರೇ ಏನಾಯ್ತು ?'ಎಂದೆ.'ಆ ಹುಡುಗನಿಗೆ ಕಪಾಳಕ್ಕೆ ಹೊಡೆದದ್ದು ನಾನೇ ಸರ್ 'ಎಂದರು.ನಾನು ಸ್ವಲ್ಪ ಬಿಗುವಾದೆ.'ಅಲ್ಲಾ ಮೇಷ್ಟ್ರೇ  ಹುಡುಗರು ತಪ್ಪು ಮಾಡಿದರೆ ತಿದ್ದ ಬೇಕು ಸರಿ.ಆದರೆ ಈ ರೀತಿ ಕಿವಿಯ ತಮಟೆ ಹರಿದು ಹೋಗುವ ಹಾಗೆ ಹೊಡೆಯಬೇಕೆ?ಅದು ತಪ್ಪಲ್ಲವೇ ? ಅವನ ಜೀವಕ್ಕೆ ಅಪಾಯ ವಾಗಿದ್ದರೆ ಏನು ಗತಿ?ಅವನಿಗೆ ಕೇಳುತ್ತಿದ್ದ ಒಂದೇ ಕಿವಿ ಕೂಡ ನೀವು ಹೊಡೆದ ದ್ದರಿಂದ ಹಾಳಾಯಿತಲ್ಲ!'ಎಂದೆ.'ಆ ಹುಡುಗ ಯಾವುದೋ ಹುಡುಗಿಯ ಬಗ್ಗೆ ಬಹಳ ಕೆಟ್ಟ ಪದ ಉಪಯೋಗಿಸಿದ ಸಾರ್.ಮೊದಲೇ ಬಿ.ಪಿ. ಇದೆ.ಸಿಟ್ಟು ಬಂದು ಕಪಾಳಕ್ಕೆ ಒಂದೇಟು ಬಿಟ್ಟೆ .ಈ ರೀತಿಯೆಲ್ಲಾ ಆಗುತ್ತೆ ಅಂತ ಗೊತ್ತಿರಲಿಲ್ಲ .ಇನ್ನು ಮೇಲೆ ಹುಡುಗರ ಮೇಲೆ ಕೈ ಮಾಡೋಲ್ಲ  .ಜೀವನದಲ್ಲಿ ಒಂದು ದೊಡ್ಡ ಪಾಠ ಕಲಿತೆ 'ಎಂದು ಗಧ್ಗದ ಕಂಠದಲ್ಲಿ ಹೇಳಿ ಹೊರಟು ಹೋದರು.
ಅದಾದ ನಂತರ ನಾನು  ದಿನಾ ಬೆಳಗಿನ ಜಾವ ಸ್ಕೂಲಿನ ಗ್ರೌಂಡ್ ಗೆ ವ್ಯಾಯಾಮ ಮತ್ತು ಜಾಗಿಂಗ್ ಮಾಡುವುದಕ್ಕೆ ಹೋಗುತ್ತಿದ್ದಾಗ ಅವರೂ ಸಿಗುತ್ತಿದ್ದರು.ಬಹಳ ಒಳ್ಳೆಯ ಮನಸ್ಸಿನ ವ್ಯಕ್ತಿ.ಸ್ವಲ್ಪ ಮುಂಗೊಪವಿತ್ತು.ಯಾರಿಗಾದರೂ ಸಹಾಯಮಾಡಬೇಕಾದರೆ 'ನಾ ಮುಂದೆ' ಎನ್ನುವಂತಹವರು.ಪರಿಚಯ ಸ್ನೇಹಕ್ಕೆ ತಿರುಗಿತು.ಕೆಲವೇ ದಿನಗಳಲ್ಲಿ 
ಬಹಳ ಆತ್ಮೀಯರಾದರು.ವ್ಯಾಯಾಮವೆಲ್ಲಾ ಮುಗಿಸಿ,ಬೆವರು ಹರಿಸುತ್ತಾ ,ತಂಗಾಳಿಗೆ ಮೈ ಒಡ್ಡಿ ಕುಳಿತಾಗ 
ನಾನು ನನಗೆ ಪ್ರಿಯವಾದ 'ಒಲುಮೆಯ ಹೂವೇ'ಹಾಡನ್ನು ಹೇಳುತ್ತಿದ್ದೆ.ಮೇಷ್ಟ್ರಿಗೆ ಕೂಡ ಈ ಹಾಡು
ಬಹಳ ಇಷ್ಟವಾಗಿತ್ತು .ನಾನು ಹಾಡುವಾಗ ಬಹಳ ಖುಷಿ ಪಡುತ್ತಿದ್ದರು.ಹಾಡು ಕೇಳುತ್ತಾ ಎಷ್ಟೋ ಸಲ ಅವರ ಕಣ್ಣಿನಲ್ಲಿ ನೀರು ಇರುತ್ತಿತ್ತು.2000 april ನಲ್ಲಿ ಅವರಿಗೆ ಎಲೆಕ್ಷನ್ ಡ್ಯೂಟಿಹಾಕಿದ್ದರು.'ಸಾರ್ ನನಗೆ ಎಲೆಕ್ಷನ್ ಡ್ಯೂಟಿ ಗೆ ಹೋಗೋಕೆ ಆಗೋಲ್ಲಾ ,ಒಂದು ಮೆಡಿಕಲ್  ಸರ್ಟಿಫಿಕೇಟ್ ಕೊಡಿ'ಎಂದರು.'ಯಾಕೇ ಮೇಷ್ಟ್ರೇ ?ಏನು ತೊಂದರೆ?'ಎಂದೆ.ಎಲೆಕ್ಷನ್ ಡ್ಯೂಟಿ ತಪ್ಪಿಸೋಕೆ ಎಲ್ಲರೂ ಮಾಡುವ ಸಾಮಾನ್ಯ ಉಪಾಯ ಇದು.'ನಡೆಯೋವಾಗ ಯಾಕೋ ಬ್ಯಾಲೆನ್ಸ್ ತಪ್ಪುತ್ತೆ ಸರ್' ಎಂದರು.ಎಲ್ಲಾ ಪರೀಕ್ಷೆ ಮಾಡಿದಾಗ ನಿಜಕ್ಕೂ ತೊಂದರೆ ಇದೆ ಎನಿಸಿ, C.T.SCAN ಮಾಡಿಸಿಕೊಂಡು ಬರಲು ಬೆಳಗಾವಿಯ ಕೆ.ಎಲ್.ಇ .ಆಸ್ಪತ್ರೆಗೆ ಕಳಿಸಿದೆ.ಅಲ್ಲಿ ಅವರಿಗೆ ಥೈರಾಯ್ಡ್ ಕ್ಯಾನ್ಸರ್ ಇರುವುದು ಪತ್ತೆಯಾಯಿತು.ಅದು ಶ್ವಾಶಕೋಶಕ್ಕೂ,ಮೆದುಳಿಗೂ ಹರಡಿತ್ತು.ಅವರಿಗೆ ಸುಮಾರು ಹದಿನೆಂಟು ವರ್ಷಗಳಿಂದ ಥೈರಾಯ್ಡ್ ಗ್ರಂಥಿ ಯಲ್ಲಿ ಒಂದು ಸಣ್ಣ ಗಡ್ದೆ ಇತ್ತಂತೆ.ನನಗೂ ಕೂಡ ಮೊದಲೇ ತಿಳಿಸಿರಲಿಲ್ಲ .ಅವರನ್ನು ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಗೆ ಸೇರಿಸಿದೆವು. ಸ್ನೇಹಿತರೆಲ್ಲಾ ಸೇರಿ ಅವರ ಚಿಕಿತ್ಸೆಯ ಖರ್ಚಿಗೆಂದು ಸುಮಾರು  ಒಂದು ಲಕ್ಷಕ್ಕೂ ಹೆಚ್ಚು ಹಣವನ್ನು ಸ್ವಇಚ್ಛೆಯಿಂದ ಸೇರಿಸಿ ಕೊಟ್ಟೆವು.
ನನಗೆ ಅಷ್ಟರಲ್ಲಿ ರಾಯಚೂರಿನ ಶಕ್ತಿನಗರಕ್ಕೆ ವರ್ಗವಾಗಿತ್ತು.ಒಂದೆರಡು ತಿಂಗಳ ನಂತರ ಅವರನ್ನು ನೋಡಲು ರಾಯಚೂರಿನಿಂದ ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಗೆ ಹೋದೆ.ಸ್ಪೆಷಲ್ ವಾರ್ಡಿನ ರೂಮೊಂದರಲ್ಲಿ ಒಬ್ಬರೇ ಇದ್ದರು.Brain surgery ಮಾಡಿ ತಲೆಗೆಲ್ಲಾ ಬ್ಯಾಂಡೇಜ್ ಸುತ್ತಿದ್ದರು.ನನ್ನನ್ನು ನೋಡಿ ಮೇಷ್ಟ್ರಿಗೆ ತುಂಬಾ ಖುಷಿಯಾಯಿತು.ಆನದದಿಂದ ತಬ್ಬಿಕೊಂಡರು.

 'ಸರ್ ಆಪರೇಶನ್ ಆಯ್ತು .ನೀವೂ ನೋಡೋಕೆ ಬಂದ್ರಿ.ಇನ್ನು ಎಲ್ಲಾ ಸರಿ ಹೋಗುತ್ತೆ ಸರ್.ನಿಮ್ಮನ್ನು ನೋಡೋಕೆ ಮುಂದಿನ ಸಲ ಶಕ್ತಿನಗರಕ್ಕೆ ನಾನೇ ಬರುತ್ತೇನೆ'ಎಂದರು. ಆ ಆಯಾಸದಲ್ಲೂ ಸುಮಾರು ಒಂದು ಗಂಟೆ ಹರಟಿದರು.'ಹೆಚ್ಚು ಮಾತನಾಡಬೇಡಿ ಮೇಷ್ಟ್ರೇ ,ಆಯಾಸ ಆಗುತ್ತೆ 'ಎಂದರೂ ಕೇಳಲಿಲ್ಲ.ಕೊನೆಗೆ ನಾನು ಹೊರಟು ನಿಂತೆ.'ಸಾರ್ ,ನಾನಿನ್ನು ಬದುಕುತ್ತೀನೋ ಇಲ್ಲವೋ ಗೊತ್ತಿಲ್ಲ ,ನನಗೋಸ್ಕರ ಒಂದುಸಲ ಆ ಹಾಡು ಹಾಡಿ ಬಿಡಿ ಸರ್' ಎಂದರು!ಕ್ಯಾನ್ಸರ್ ವಾರ್ಡಿನಲ್ಲಿ ಹಾಡೇ!!?ನಾನು ನನ್ನ ಕನಸು ಮನಸಿನಲ್ಲೂ ಇಂತಹ ಸಂದರ್ಭ
ಊಹಿಸಿಕೊಂಡಿರಲಿಲ್ಲ.'ಬಿಸಿ ತುಪ್ಪ ಉಗುಳುವಂತಿಲ್ಲ,ನುಂಗುವಂತಿಲ್ಲ' ಎನ್ನುವಂತಾಗಿತ್ತು ನನ್ನ ಪರಿಸ್ಥಿತಿ !ಅವರನ್ನು ಆ ಸ್ಥಿತಿ ಯಲ್ಲಿ ನೋಡಿ ಮನಸ್ಸು ಬಹಳ ನೊಂದಿತ್ತು.ಹಾಡುವ ಮೂಡ್ ಇರಲಿಲ್ಲ.ಅವರ ಮನಸ್ಸನ್ನು ನೋಯಿಸದಿರಲು ಅನಿವಾರ್ಯವಾಗಿ ಹಾಡಲೇ ಬೇಕಾಯಿತು.ನನ್ನೆಲ್ಲಾ ನೋವನ್ನೂ ಹೊರ ಹಾಕುವಂತೆ,ಜೀವನದಲ್ಲಿ ಅದೇ ನನ್ನ ಕಡೆಯ ಹಾಡು ಎಂಬಂತೆ ನನ್ನನ್ನೇ ಮರೆತು ಹಾಡಿದೆ!'ಒಲುಮೆಯ ಹೂವೇ,ನೀ ಹೋದೆ ಎಲ್ಲಿಗೇ!ಉಳಿಸಿ ಕಣ್ಣ ನೀರ,ಈ ನನ್ನ ಬಾಳಿಗೇ'.ಹಾಡು ಮುಗಿಯುವ ವೇಳೆಗೆ ಇಬ್ಬರ ಕಣ್ಣಲ್ಲೂ ಧಾರಾಕಾರ ನೀರು!ಭಾರ ಹೃದಯದಿಂದ ಅವರನ್ನು ಬೀಳ್ಕೊಟ್ಟೆ.ಇದಾದ ಕೆಲವೇ ತಿಂಗಳಲ್ಲಿ ಮೇಷ್ಟ್ರು ತನ್ನ ಇಹ ಲೋಕ ಯಾತ್ರೆ ಮುಗಿಸಿದ್ದರು.ಕಾಣದ ಲೋಕಕ್ಕೆ ಪಯಣ ಬೆಳೆಸಿದ ಆ ನನ್ನ ಆತ್ಮೀಯ ಸ್ನೇಹಿತನಿಗೆ ಈ ನನ್ನ ಮೆಚ್ಚಿನ ಗೀತೆಯ ಮೂಲಕನಮನಗಳನ್ನು ಸಲ್ಲಿಸುತ್ತಿದ್ದೇನೆ.'ಒಲುಮೆಯ ಹೂವೇ!ನೀ ಹೋದೆ ಎಲ್ಲಿಗೇ !ಉಳಿಸಿ ಕಣ್ಣ ನೀರ ಈ ನನ್ನ ಬಾಳಿಗೇ '.

(ಇದು ಹೋದ ವರ್ಷ ಆಗಸ್ಟ್ ನಲ್ಲಿ ಹಾಕಿದ್ದ ಲೇಖನ.ಹೊಸದೇನನ್ನೂ ಬರೆದಿಲ್ಲವಾದ್ದರಿಂದ ನನಗೆ ಇಷ್ಟವಾಗಿದ್ದ ಈ ಹಳೆಯ ಲೇಖನವನ್ನೇ ಹಾಕುತ್ತಿದ್ದೇನೆ.)

Saturday, July 26, 2014

"ಡೊಂಕು ಬಾಲದ ಮನವೇ ..!!!!! "

ಅಲ್ಲಿ ಸುತ್ತಿ ,ಇಲ್ಲಿ ಸುಳಿದು,
ಮತ್ತೇ ಮರಳಿ ಅಲ್ಲಿಗೇ ...!!
ಬಂದೆಯಲ್ಲ ಮನವೇ ನೀನು
ನೋವ ನೆನಪಿನಲ್ಲಿಗೇ ..... !!!!

ನೋಯ್ವ ಹಲ್ಲಿನಲ್ಲಿಗೇ ..... ,
ಮತ್ತೇ ,ಮತ್ತೇ ,ಮೆಲ್ಲಗೇ ...!!
ಸುಳಿಯುವಂತೆ ನಾಲಿಗೇ ..,
ಮರಳಿ ಬಂದೆ ಅಲ್ಲಿಗೇ !!!!
ನೋವ ನೆನಪಿನಲ್ಲಿಗೇ !!!!

ಸುಳಿಯುವಂತೆ ದೀಪದ ಹುಳು
ಸುಡುವ ಸೊಡರ ಸುತ್ತಲೂ !!
ಗಿರಕಿ ಹೊಡೆದೇ ಮನವೇ ನೀನು
ನೋವ ಸುತ್ತ ಮುತ್ತಲು !!!!

ಬಿಡು ಜೀವವೇ ,ಬಿಡು ಅಲ್ಲೇ
ಸುಡುವ ಹಾಳು ನೆನಪನು !!
ಮನದ ಮರದಿ ಚೈತ್ರ ತರಲಿ
ತಪು ತಂಪು ತಳಿರನು!!!!
ಸುಖದ  ತಂಪು ನೆನಪನು !!!!

Friday, July 18, 2014

" ಅಪ್ಪಾ ನಾನು ಹದಿನೇಳನೇ RANKಉ !!!! "

ಈಗೀಗ ತಂದೆ  ತಾಯಂದಿರು L.K.G.ಯಿಂದಲೇ ತಮ್ಮ ಮಕ್ಕಳ RANK ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ !!!!! ಎಲ್ಲಾ ಮಕ್ಕಳೂ ಫಸ್ಟ್ RANKಏ  ಬರಬೇಕೆಂದರೆ ಹೇಗೆ ಸಾಧ್ಯ!!!!?

ಇದು ಸುಮಾರು ಇಪ್ಪತ್ತು ವರುಷಗಳ ಕೆಳಗೆ ನಡೆದ ಘಟನೆ. ನಾನು ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅವರ ಮಗ ಆರನೇ ತರಗತಿಯಲ್ಲಿ  ಓದುತ್ತಿದ್ದ . ಸಂಜೆ ಶಾಲೆಯಿಂದ ಕುಣಿಯುತ್ತಾ ಬಂದ .ಅವನ  ತಂದೆ ಅವನನ್ನು "ಏನೋ ,ಇಷ್ಟೊಂದು ಖುಷಿಯಾಗಿದ್ದೀಯಾ ? " ಎಂದು ವಿಚಾರಿದರು. ಅದಕ್ಕವನು ಖುಷಿಯಿಂದ " ಅಪ್ಪಾ ...... ನಾನು ಹದಿನೇಳನೇ  RANKಉ !!!!" ಎಂದ . ಅದಕ್ಕೆ ಅವರಪ್ಪ " ಅಲ್ಲಪ್ಪಾ ಮಗನೇ ......... ಹದಿನೇಳನೇ  RANK ಬಂದರೆ ಯಾರಾದರೂ ಇಷ್ಟೊಂದು ಖುಷಿ ಪಡುತ್ತಾರೆಯೇ !!!!?"ಎಂದು ಆಶ್ಚರ್ಯದಿಂದ ಕೇಳಿದರು. "ನನ್ನ ಬೆಸ್ಟ್ ಫ್ರೆಂಡ್ ಗಿಂತ ಮುಂದೆ ಇದ್ದೀನಿ. ಅವನು ಹದಿನೆಂಟನೇ RANKಉ " ಎಂದ !!!! ಸಾಹೇಬರ ಭಾರೀ ಖುಷಿಗೆ ಕಾರಣ ತಿಳಿಯಿತು!!!! ಅದಕ್ಕೆ  ಅವರ ತಂದೆ "ನಿಮ್ಮ ಕ್ಲಾಸಲ್ಲಿ ಎಷ್ಟು ಜನ ಹುಡುಗರಿದ್ದಾರೆ ?"ಎಂದು ಕೇಳಿದರು. "ಹದಿನೆಂಟು"ಎಂದು ಉತ್ತರ ಬಂತು. ಉತ್ತರ ಕೇಳಿ ನಾನು ದಂಗಾದೆ !!!! ಇರುವ ಹದಿನೆಂಟು ಜನರಲ್ಲಿ ಹದಿನೇಳನೇ RANK ಬಂದು,ಮೊದಲು ಬಂದವನ ಹಾಗೆ ಕುಣಿದು ಕುಪ್ಪಳಿಸುತ್ತಿದ್ದಾನೆ  !!!! ಅವನ ತಂದೆಯೂ  ಯಾವುದಕ್ಕೂ ತಲೆ ಕೆಡಿಸಿ ಕೊಳ್ಳದೇ  ಸದಾ ಖುಷಿಯಿಂದ ರುತ್ತಿದ್ದ ದಿಲ್ದಾರ್ ಮನುಷ್ಯ . "ಆಯ್ತು ಹೋಗು ,ಮುಂದಿನ ಸಲ ಹದಿನಾರನೇ RANK ಬರೋಕೆ ಟ್ರೈ ಮಾಡು"ಎಂದ. "ಆಯ್ತಪ್ಪಾ " ಎನ್ನುತ್ತಾ ,ಮಗರಾಯ ಕುಣಿಯುತ್ತಾ ಆಟಕ್ಕೆ ಓಡಿದ !!!! ಇಂದು ಅವನು ಅಮೆರಿಕಾದಲ್ಲಿ ದೊಡ್ಡದೊಂದು  ಹುದ್ದೆಯಲ್ಲಿದ್ದಾನೆ. ಕೈ ತುಂಬಾ ಸಂಬಳ ತೆಗೆದು ಕೊಂಡು ಸುಖವಾಗಿದ್ದಾನೆ. ಮಕ್ಕಳ RANK ಬಗ್ಗೆ ಬಹಳ ತಲೆ ಕಡಿಸಿ ಕೊಳ್ಳುವವರು ಸ್ವಲ್ಪ ಯೋಚಿಸಬೇಕಾದ ವಿಷಯವಿದು. 

Saturday, April 19, 2014

"ಅಬ್ಬಾ.....!!!!......ಆ ...ಕ್ಷಣಗಳು !!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

Monday, February 24, 2014

"ನಲ್ಲಿ ಇದೆ ನೀರಿಲ್ಲ !!!! "

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

Wednesday, January 8, 2014

"ಚಿತ್ರ ಸಂತೆಯ ...ಚಿತ್ರಗಳು !!!!!"

ಮಧ್ಯಾಹ್ನದ ಉರಿಬಿಸಿಲಿಗೆ ಮೈಒಡ್ಡಿಕೊಂಡು, ಫುಟ್ ಪಾತಿನ ಪಕ್ಕದ ಬೇಲಿಯ ಸರಳುಗಳಿಗೆ ಸಾಲಾಗಿ ಒರಗಿ ಕುಳಿತ ಪೈಂಟಿಂಗ್ ಗಳು ಇನ್ನೂ ತಾವು ಮಾರಾಟ ವಾಗದೆ ಉಳಿದಿರುವುದಕ್ಕೆ ,ಯಾರಿಗೂ ಕೇಳದಂತೆ ಮೆಲ್ಲನೆ ಬಿಕ್ಕಳಿಸುತ್ತವೆ.ಪಕ್ಕದಲ್ಲೇನಿಂತ ಅವುಗಳ ಜನಕ ಗಿರಾಕಿಗಳಿಗಾಗಿ ಕಾದು ಬೇಸತ್ತು,ಹಚ್ಚಿದ ಸಿಗರೇಟು ಒಂದರಿಂದ ಸುದೀರ್ಘವಾಗಿ ದಂಎಳೆದು ಬೇಸರದ ಹೊಗೆಕಾರುತ್ತಾನೆ. ಒಂದೊಂದು ಚಿತ್ರವೂ ಕೈಬೀಸಿ ಕರೆದು, ದಯಮಾಡಿ ನನ್ನ ಸೆರೆಬಿಡಿಸಿ,ನಿಮ್ಮ ಬೆಡ್ ರೂಮಿನಲ್ಲೋ,ಹಾಲಿನಲ್ಲೋ, ಕಡೆಗೆ ಬಾತ್ ರೂಮಿನಲ್ಲೋ ಹ್ಯಾಂಗ್ ಮಾಡಿ ಎಂದು ಆರ್ತರಾಗಿ ಬೇಡಿಕೊಳ್ಳುತ್ತವೆ.ತಮ್ಮ ಡ್ರೆಸ್ ಗಳ ಹಿಡಿತಕ್ಕೆ ಮೀರಿ,ಎಲ್ಲಾ ಕಡೆಯಿಂದಲೂ ಚಿಮ್ಮುತ್ತಿರುವ ಹುಡುಗಿಯರು ,ತಮ್ಮ ತಂಪು ಕನ್ನಡಕದ ಹಿಂದಿನಿಂದಲೇ ನಾಲ್ಕು ಪೈಂಟಿಂಗ್ ಗಳನ್ನು ಅವಲೋಕಿಸಿ ಸುಸ್ತಾಗಿ,ಎರಡೆರಡು ಕೋನ್ ಐಸ್ಕ್ರೀಂ ತಿಂದು ತಮ್ಮ ಧಡೂತಿ ದೇಹಗಳನ್ನು ಮತ್ತಷ್ಟು ಸೊಂಪಾಗಿಸಿಕೊಳ್ಳುತ್ತಾರೆ.ಐಸ್ಕ್ರೀಂ ಮಾರಾಟಗಾರರಿಗೋ ಸುಗ್ಗಿಯೋಸುಗ್ಗಿ .ಚಿತ್ರಗಳಿಗಿಂತ ಅವೇ ಹೆಚ್ಚು ಮಾರಾಟವಾಗುತ್ತಿವೆ .ಮೊಮ್ಮಗಳಪೈಂಟಿಂಗ್ ಅನ್ನು ಕಾಯುತ್ತ ಕುಳಿತ ರಸಗುಲ್ಲಾ ತಿಂದು ಕೆಂಪಾದ ಕಲ್ಕತ್ತಾದ ಅಜ್ಜಿ ಯೊಬ್ಬಳು ಉರಿಬಿಸಿಲಿನ ತಾಪಕ್ಕೆ ಮತ್ತಷ್ಟು ಕೆಂಪಾಗಿ ತಾನೇ ಒಂದು ಪೈಂಟಿಂಗ್ ನಂತೆ ಕಾಣುತ್ತಾಳೆ.ಕಲಾವಿದರ ಗುಂಪೊಂದು ಗಿರಾಕಿಗಳ ಚೌಕಾಸಿಯ ಬಗ್ಗೆ ಬೇಸರದಿಂದ ಮಾತಾಡಿಕೊಂಡು, ಚಿತ್ರಸಂತೆಯವರು ಕೊಟ್ಟ ರೈಸ್ ಬಾತ್ ತಿನ್ನುತ್ತಿದ್ದಾರೆ.ಕೆಲವರು ದೊಡ್ಡ ದೊಡ್ಡ ಕ್ಯಾಮೆರಾ ಗಳಲ್ಲೋ ಮೊಬೈಲ್ ಗಳಲ್ಲೋ ಚಿತ್ರಗಳ ಫೋಟೋ ಕ್ಲಿಕ್ಕಿಸುವುದನ್ನೇ ಒಂದುದೊಡ್ಡ ಕಾಯಕ ಮಾಡಿಕೊಂಡಿದ್ದಾರೆ. ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟ ಕರುವೊಂದು ಏನನ್ನೂ ಮೇಯದೆ ಅತ್ತಿಂದಿತ್ತ ಓಡಾಡುವಂತೆ,ಕೆಲವರು ಯಾವ ಚಿತ್ರವನ್ನೂ ಖರೀದಿಸದೇ, ಬರಿದೇ ಅತ್ತಿಂದಿತ್ತ ತಿರುಗಾಡಿ ಕಾಲು ನೋಯಿಸಿ ಕೊಂಡಿದ್ದಾರೆ.ನೂರಾರು ಹೆಣ್ಣುಗಳನ್ನು ನೋಡಿ ಕಡೆಗೆ ಯಾವುದೋ ಒಂದನ್ನು ಗಂಟು ಹಾಕಿಕೊಳ್ಳುವ ಗಂಡಿನಂತೆ ಕೆಲವರು ಎಷ್ಟೋ ಚಿತ್ರಗಳನ್ನು ನೋಡಿ ಖರೀದಿಸದೇ ಬಿಟ್ಟು ಕಡೆಗೆ ಕಳಪೆಚಿತ್ರ ಒಂದನ್ನು ಖರೀದಿಸಿ, ಕೊಟ್ಟ ಬೆಲೆ ಜಾಸ್ತಿಯಾಯ್ತೇನೋ ಎಂದು ಒದ್ದಾಡುತ್ತಾರೆ.ಕತ್ತಲಾಗುತ್ತಿದ್ದಂತೆ ಮಾರಾಟವಾಗದ ಚಿತ್ರಗಳ ಮೌನ ರೋದನ ಮುಗಿಲು ಮುಟ್ಟುತ್ತದೆ.ಅವುಗಳಿಗೆ ಸಾಂತ್ವನ ಹೇಳುವಂತೆ ಎಲ್ಲಿಂದಲೋ ತಂಗಾಳಿ ಬೀಸಿ ,ಆಶಾಕಿರಣದ ಸಂಕೇತವಾಗಿ ಬೀದಿ ದೀಪಗಳು ಜಗ್ಗನೆ ಹತ್ತಿಕೊಳ್ಳುತ್ತವೆ .ನಾಳೆ ಮತ್ತೆ ಬೆಳಗಾಗುತ್ತದೆ ಎನ್ನುವ ಭರವಸೆಯಲ್ಲಿ ಚಿತ್ರಗಳು ಒಂದೊಂದಾಗಿ ಪೆಟ್ಟಿಗೆ ಸೇರುತ್ತವೆ ----- ಮತ್ತೆ ಯಾವುದೋ ಸಂತೆಗೆ ಪಯಣ ಬೆಳಸಲು.ಜೀವನವೆಂದರೆ ಅದೇ ಅಲ್ಲವೇ?..............ನಿಲ್ಲದ ಪಯಣ!!
(ಇದು ಸುಮಾರು ಮೂರು ವರುಷಗಳ ಹಿಂದೆ ನನ್ನ ಬ್ಲಾಗ್ ಶುರುಮಾಡಿದಾಗ ಬರೆದ ಲೇಖನ.ಮತ್ತೊಂದು ಚಿತ್ರಸಂತೆ ಬಂದು ಹೋಗಿದೆ.ಇಂದಿಗೂ ಇದು ಪ್ರಸ್ತುತ ಎನಿಸಿರುವುದರಿಂದ ಅದನ್ನು ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ)

Friday, December 13, 2013

"ಬದುಕೇ.......ಮನ್ನಿಸಿಬಿಡು ನನ್ನ !!!!"

ಬದುಕೇ .....,ಮನ್ನಿಸಿ ಬಿಡು ನನ್ನ !!!
ನರ ನರಳಿ ಬದುಕಿದ್ದು......,
ಬದುಕಿಯೂ .......ಸತ್ತದ್ದು !!!
ನಿದ್ರೆ ಇಲ್ಲದೇ ವ್ಯರ್ಥ ಚಿಂತೆಯಲಿ 
ರಾತ್ರಿ ಎಲ್ಲಾ ಹೊರಳಿದ್ದು !!!
ಕ್ಷಮಿಸಿ ಬಿಡು ದಯೆ ತೋರಿ !!!
ಬದುಕಿ ಬಿಡುತ್ತೇನೆ ಮತ್ತೊಮ್ಮೆ !!!
ಹೀಗೊಮ್ಮೆ ,ಇನ್ನೊಮ್ಮೆ !!!
ಕ್ಷಣ ಕ್ಷಣವೂ ಬದುಕುತ್ತಾ 
ಬದುಕ ಸವಿಯ ...........,
ಗುಟುಕು,ಗುಟುಕಾಗಿ ಸವಿಯುತ್ತಾ ,
ಅನು ಕ್ಷಣವೂ, ಬದುಕಿದ್ದಕ್ಕಾಗಿಯೇ 
ನಲಿ,ನಲಿಯುತ್ತಾ...........!!!!
ಬದುಕಿ ಬಿಡುತ್ತೇನೆ ,ಸಾಯುವ ಮುನ್ನ !!!

Wednesday, October 30, 2013

ಅಕ್ಟೋಬರ್ ಎರಡು ಮತ್ತು ಮಧ್ಯಾಹ್ನದ ಊಟ !!!

ಸೆಪ್ಟೆಂಬರ್ ಮೂವತ್ತಕ್ಕೆ ನಿವೃತ್ತಿ ಹೊಂದಿದೆ.ಅಕ್ಟೋಬರ್ ಆರನೇ ತಾರೀಕು ಮನೆ ಖಾಲಿ ಮಾಡುವುದೆಂದು ನಿರ್ಧಾರವಾಗಿತ್ತು.ಅಕ್ಟೋಬರ್ ಒಂದರಿಂದಲೇ ಪ್ಯಾಕಿಂಗ್ ಶುರುವಾಗಿತ್ತು.ಸುಮಾರು ಹತ್ತು ದಿನಗಳ  ಹಿಂದೆಯೇ ಪರಿಚಯಸ್ಥರು,ಸ್ನೇಹಿತರು ಒಂದೊಂದು ದಿನ ,ಒಂದೊಂದು ಹೊತ್ತು ಊಟಕ್ಕೆ ಕರೆದಿದ್ದರು.ಮನೆ ಶಿಫ್ಟ್ ಮಾಡುವ ಗಡಿಬಿಡಿಯಲ್ಲಿ ಯಾರು,ಯಾರು,ಯಾವ ದಿನ ಊಟಕ್ಕೆ ಕರೆದಿದ್ದಾರೆ ಎಂದು ಗುರುತು ಮಾಡಿಕೊಳ್ಳದೇ,ನನ್ನ ನೆನಪಿನ ಶಕ್ತಿಯ ಮೇಲೇ ಭರವಸೆ ಇಟ್ಟಿದ್ದೆ.ಇಲ್ಲಿ ಸ್ವಲ್ಪ ನಮ್ಮ ಕಾರ್ಗಲ್ ಕಾಲೋನಿಯ ಬಗ್ಗೆ ಹೇಳಬೇಕು.ಕಾರ್ಗಲ್,ವಿಶ್ವ ವಿಖ್ಯಾತ  ಜೋಗ್ ಜಲಪಾತದ ಬಳಿ ಇರುವ ಸಣ್ಣ ಊರು.ಜೋಗ್ ಮತ್ತು ಕಾರ್ಗಲ್ ನಲ್ಲಿ ಸುಮಾರು ಮನೆಗಳು ಬೆಟ್ಟ ಗುಡ್ಡಗಳ ಮೇಲೆ ಇವೆ.ನಾವಿದ್ದ ಮನೆ ಒಂದು ಬೆಟ್ಟದ ತುತ್ತ ತುದಿಯಲ್ಲಿತ್ತು.ನಮ್ಮ ಮನೆಗೆ ಬರಬೇಕಾದರೆ ಸುಮಾರು ಏರು ಹತ್ತಿ ಬರಬೇಕಿತ್ತು.ಹಲವಾರು ವರ್ಷಗಳ ಹಿಂದೆ ಪಾರ್ಶ್ವ ವಾಯು ಪೀಡಿತರಾಗಿದ್ದ ಶಂಕರಮೂರ್ತಿ ಎಂಬ ವಯೋ ವೃದ್ಧರೊಬ್ಬರು ಆಗಾಗ ಆಸ್ಪತ್ರೆಗೆ ನನ್ನ ಬಳಿ ಚಿಕಿತ್ಸೆಗೆಂದು ಬರುತ್ತಿದರು.ಹತ್ತು ದಿನ ಮೊದಲೇ, ಸುಮಾರು ಎರಡು ಕಿಲೋಮೀಟರ್  ದೂರ ಕಷ್ಟ ಪಟ್ಟು ನಡೆದು ಕೊಂಡು,ಮೊದಲನೇ  ಮಹಡಿಯಲ್ಲಿದ್ದ ನಮ್ಮ ಮನೆಗೆ ಬಂದು,ಅಕ್ಟೋಬರ್ ಎರಡನೇ ತಾರೀಕು ಮಧ್ಯಾಹ್ನ ಊಟಕ್ಕೆ ಬರಬೇಕೆಂದು ಹೇಳಿ ಹೋದರು.ಅವರು ನನ್ನ ಮೇಲಿಟ್ಟಿದ್ದ ಪ್ರೀತಿ,ವಿಶ್ವಾಸಕ್ಕೆ ಮೂಕವಿಸ್ಮಿತನಾಗಿದ್ದೆ.ಅಕ್ಟೋಬರ್ ಎರಡನೇ ತಾರೀಕು ಬೆಳಿಗ್ಗೆ ನನ್ನ ಹೆಂಡತಿ "ಇವತ್ತು ಮಧ್ಯಾಹ್ನ ಯಾರ ಮನೇಲಿ ಊಟಕ್ಕೆ ಕರೆದಿದ್ದಾರೆ?ಅಥವಾ ನಾನು ಅಡಿಗೆ ಮಾಡಬೇಕಾ?"ಎಂದಳು. ನನಗೋ ಪೂರ್ತಿ ಕನ್ಫ್ಯೂಷನ್ನು.ತಕ್ಷಣಕ್ಕೆ ನೆನಪಿಗೆ ಬರದಿದ್ದರೂ ನಿಧಾನವಾಗಿ ಟ್ಯೂಬ್ ಲೈಟ್ ಹತ್ತಿಕೊಂಡಿತು.'ಓಹೋ.......ಇವತ್ತು ಶಂಕರ ಮೂರ್ತಿಯವರು ಮಧ್ಯಾಹ್ನ ಊಟಕ್ಕೆ ಕರೆದಿದ್ದಾರಲ್ಲವೇ!' ಎಂದುಕೊಂಡೆ. ಅರವತ್ತರ ನನ್ನ ಕಥೆಯೇ ಹೀಗಿರಬೇಕಾದರೆ,ನನಗಿಂತ ಹಿರಿಯರಾದ ಶಂಕರ ಮೂರ್ತಿಯವರಿಗೆ ನಮ್ಮನ್ನು ಊಟಕ್ಕೆ ಕರೆದಿದ್ದು ನೆನಪಿರುತ್ತೋ ಇಲ್ಲವೋ ಎನ್ನುವ ಅನುಮಾನ ಶುರುವಾಯಿತು.ಸರಿ ಅವರಿಗೆ ಫೋನ್ ಮಾಡಿ ಕನ್ಫರ್ಮ್ ಮಾಡಿಕೊಂಡು ಬಿಡೋಣ ಎಂದು ಕೊಂಡು  ಮೊಬೈಲ್ ನಲ್ಲಿ ಅವರಿಗೆ ಫೋನಾಯಿಸಿದೆ.
"ಹಲೋ......",ಎಂದದಕ್ಕೆ ಅತ್ತ ಕಡೆಯಿಂದ "ಯಾರು ?"ಎಂದು ಹೆಂಗಸೊಬ್ಬರ ದನಿ ಕೇಳಿತು. "ಹಲ್ಲೋ .....ನಮಸ್ಕಾರಾಮ್ಮ.ನಾನು ಡಾಕ್ಟರ್ ಕೃಷ್ಣ ಮೂರ್ತಿ ಅಂತ"ಎಂದೆ. ಅತ್ತ ಕಡೆಯಿಂದ "ಯಾರೋ ಡಾಕ್ಟರ್ ಕೃಷ್ಣ ಮೂರ್ತಿಯಂತೆ ನೋಡಿ "ಎನ್ನುವ ದನಿ ಕೇಳಿತು.ಆ ಕಡೆಯಿಂದ ಈಗ ಗಂಡಸು ದನಿ "ಹಲೋ"ಎಂದಿತು."ಹಲೋ ಶಂಕರ ಮೂರ್ತಿಯವರಾ?"ಎಂದೆ.ಆ ಕಡೆಯಿಂದ"ಹೌದು"ಎನ್ನುವ ದನಿ ಕೇಳಿ ಬಂತು."ಸರ್ ಇವತ್ತು ಅಕ್ಟೋಬರ್ ಎರಡು ,ಜ್ಞಾಪಕ ಇದೆಯಾ ಸಾರ್?"ಎಂದೆ. ಆ ಕಡೆಯಿಂದ "ಹೌದು ಸರ್,ಇವತ್ತು ಗಾಂಧೀ ಜಯಂತಿ"ಎನ್ನುವ ಉತ್ತರ ಕೇಳಿ ನನ್ನ ಎದೆ ಧಸಕ್ ಅಂತು."ಅರೇ...!! ಇವರಿಗೆ ನಮ್ಮನ್ನು ಊಟಕ್ಕೆ ಕರೆದಿರುವ ನೆನಪೇ ಇಲ್ಲವಲ್ಲ!!! ",ಹೇಗಪ್ಪಾ ನೆನಪು ಮಾಡೋದು ಎಂದು ಕಸಿವಿಸಿಯಾಯಿತು.ಧೈರ್ಯ ಮಾಡಿ "ಇವತ್ತು ಮಧ್ಯಾಹ್ನ ನಿಮ್ಮ ಮನೆಯಲ್ಲಿ  ಊಟ ಅಲ್ವಾ?"ಎಂದೆ.ಅತ್ತ ಕಡೆಯವರಿಗೆ ಡಾಕ್ಟರ್ರಿಗೆ ಎಲ್ಲೋ ತಲೆ ಕೆಟ್ಟಿದೆ ಅನಿಸಿರಬೇಕು. "ಸಾರ್,ನಾನು ಬೆಂಗಳೂರಿನ  head office ನ ಶಂಕರ ಮೂರ್ತಿ "ಎಂದರು.ನಾನು ಪರಿಸ್ಥಿತಿ ವಿವರಿಸಿದ ಮೇಲೆ ನನ್ನ ಫಜೀತಿ ನೋಡಿ ಮನಸಾ ನಕ್ಕರು.ಇದಾದ ಸ್ವಲ್ಪ  ಹೊತ್ತಿಗೇ ನಮ್ಮ ಕಾರ್ಗಲ್ಲಿನ ಶಂಕರ ಮೂರ್ತಿಯವರಿಂದ ನನ್ನ ಮೊಬೈಲಿಗೆ ಕರೆ ಬಂತು. ಶಂಕರ ಮೂರ್ತಿಯವರು "ಸಾರ್ ,ಇವತ್ತು ಅಕ್ಟೋಬರ್ ಎರಡು ,ಮಧ್ಯಾಹ್ನ ನಮ್ಮ ಮನೇಲಿ ಊಟಕ್ಕೆ ಕರೆದಿದ್ದೆ .ನೆನಪಿದೆಯಾ "ಎಂದರು. ನಾನು ಸುಸ್ತು!!! ಬೆಂಗಳೂರಿಗೆ ಬಂದ ಮೇಲೆ ಶಂಕರ ಮೂರ್ತಿಯವರನ್ನು  ಆಫೀಸಿನಲ್ಲಿ ಭೇಟಿ ಆದಾಗ,ಈ ಘಟನೆ ನೆನೆಸಿಕೊಂಡು ಇಬ್ಬರೂ ನಕ್ಕೂ,ನಕ್ಕೂ ...ಸಾಕಾಯಿತು. ಅವರೇ "ಇದನ್ನು ನಿಮ್ಮ ಬಾಗಿನಲ್ಲಿ ಹಾಕಿ ಸರ್ .ಚೆನ್ನಾಗಿದೆ"ಎಂದರು.ನನ್ನ ಅನುಭವ ಹೇಗಿದೆ ಎನ್ನುವುದನ್ನು ಇನ್ನು  ನೀವು ಹೇಳ ಬೇಕು. ನಮಸ್ಕಾರ.

Sunday, September 22, 2013

"ನನ್ನ ಮತ್ತು ನೋವಿನ ನಂಟು !!!! "

ನಾನು ಅಂದ್ರೆ ನೋವಿಗೆ 
ಅದೇನೋ ನಲಿವು !!!!

ನನ್ನನ್ ಕಂಡ್ರೆ ಅದಕೆ 
ಏನೋ ವಿಶೇಷ ಒಅವು !!!

ರಾತ್ರಿಯಲ್ಲಿ ಮಂಡಿಯಲ್ಲಿ 
ಬಂದು ಮಲಗುತ್ತೇ !!!


ಬೆಳಗಾಗುತ್ಲೇ  ಬೆನ್ನಲಿ ಎದ್ದು 
ಹಲೋ ಎನ್ನುತ್ತೆ !!!

ಹಗಲಲ್ಲೆಲ್ಲಾ ಸಂದೀ ಸುತ್ತಿ 
ಸಂಜೆ ಕತ್ತಲ್ಲಿ ಕೂರುತ್ತೆ !!!


ಕತ್ನಲ್ ಕೂತು ,ಸಲಿಗೆ ಕೊಟ್ರೆ 
ತಲೇಗು ಏರುತ್ತೇ !!!

ಕಷ್ಟ ಅಂತ ಜೀವದ್ ಗೆಳೆಯನ್
ದೂರೋಕಾಗುತ್ತಾ ?

ನೀವೇ ಹೇಳಿ ನೋವಿನ ಮನಸನ್ 
ನೋಯ್ಸೋಕಾಗುತ್ತಾ?

ಬಾರೋ ನೋವೇ, ಮುಳ್ಳಿನ ಹೂವೇ!!!
ಕೂಡಿ ಬಾಳೋಣ .

ಕೈ ಕೈ ಹಿಡಿದು,ಕುಣಿಯುತ ನಲಿದು 
ಎಲ್ಲರ ನಗಿಸೋಣ !!!

ನಗಿಸುತ ,ನಮ್ಮನೇಮರೆಯೋಣ !!!! 

(2000 ನೇ ಇಸವಿಯ ಹಳೆಯ ಡೈರಿ ಒಂದರಲ್ಲಿ ಗೀಚಿದ ಸಾಲುಗಳಿವು.ಆಗ ತಾನೇ ಹೈದರಾಬಾದಿನಲ್ಲಿ ಡಿಸ್ಕ್ ಪ್ರೋಲ್ಯಾಪ್ಸ್ ಆಗಿ ಬೆನ್ನಿನ ಆಪರೇಶನ್ ಮಾಡಿಸಿಕೊಂಡಿದ್ದೆ.ಬೆನ್ನಿನ ನೋವಿನ ಜೊತೆಗೆ ಆಗಾಗ ಕುತ್ತಿಗೆ ನೋವು,ಮಂಡಿ ನೋವು  ಮತ್ತು ಮೈಗ್ರೈನ್ ತಲೆ ನೋವೂ ಕಾಡುತ್ತಿತ್ತು. ರೋಗಿಗಳ ನೋವನ್ನು ನಿವಾರಿಸುವ ಹೊಡೆದಾಟ ದೊಂದಿಗೆ ನನ್ನ ನೋವುಗಳ ಜೊತೆಯೂ ಹೋರಾಡ ಬೇಕಿತ್ತು!!! ಆಗ ನೋವಿನೊಂದಿಗೆ ಯುದ್ಧ ವಿರಾಮ ಘೋಷಿಸಿ ,ರಾಜೀ ಸೂತ್ರ ಮಾಡಿಕೊಂಡೆ.ಆಗ ಬರೆದ ಪದ್ಯವಿದು .)

Monday, September 9, 2013

"ಸಾರ್ ಒಂದು ಡ್ರಿಪ್ ಹಾಕಿ !!!"

ಈ ತಿಂಗಳ ಕೊನೆಯಲ್ಲಿ ಮೂವತ್ತಾರು ವರ್ಷಗಳ ವೈದ್ಯಕೀಯ ವೃತ್ತಿಯಿಂದ ನಿವೃತ್ತಿ.ವೈದ್ಯರಿಗೆ ನಿವೃತ್ತಿ ಎಂಬುದಿಲ್ಲ 
ಎನ್ನುವ ಮಾತಿದೆ.ಆದರೂ ಸಧ್ಯದ ಸೇವೆಯಿಂದ ತಾತ್ಕಾಲಿಕ ವಿರಾಮ.ನನ್ನ ಸುಧೀರ್ಘ ವೈದ್ಯಕೀಯ ವೃತ್ತಿಯ 
ಅವಧಿಯಲ್ಲಿ ಸುಮಾರು ಔಷಧಿಗಳ ಅಡ್ಡ ಪರಿಣಾಮಗಳನ್ನು ನೋಡಿದ್ದೇನೆ.ಆದ್ದರಿಂದ ಔಷಧಿಗಳನ್ನು
 ಕೊಡುವಾಗ ಅಳೆದು,ತೂಗಿ,ಆದಷ್ಟೂ ಕಡಿಮೆ ಔಷಧಿಗಳನ್ನು ಕೊಡುವ ಪರಿಪಾಠ ನನ್ನದು.ಈಗೀಗ 
ಕೆಲವರು ಔಷಧವನ್ನೇ ಆಹಾರದಂತೆ ತಿನ್ನುವುದನ್ನು ನೋಡಿ ಗಾಭರಿಯಾಗುತ್ತದೆ.ಅವಶ್ಯಕತೆ ಇಲ್ಲದ 
ಔಷಧಿಗಳನ್ನು ತಾವೇ ಖರೀದಿಸಿ ತಿನ್ನುವ ಕೆಲವರನ್ನು ಕಂಡಿದ್ದೇನೆ. ಮಾತೆತ್ತಿದರೆ ಚುಚ್ಚುಮದ್ದಿಗಾಗಿಯೋ,
ಡ್ರಿಪ್ಸ್ ಗಾಗಿಯೋ ವೈದ್ಯರ ಮೇಲೇ ಒತ್ತಡ ಹೇರುವ ಜನರೂ ಉಂಟು.ಇದರ ಮೇಲೆ,ಇಂಟರ್ನೆಟ್
 ನೋಡಿ ಅರ್ಧಂಭರ್ಧ ಜ್ಞಾನ ಪಡೆದು ಎಲ್ಲವೂ ತಿಳಿದಿರುವಂತೆ ಸ್ವಯಂ ವೈದ್ಯಕೀಯ 
ಮಾಡಿಕೊಳ್ಳುವವರೂ ಕಮ್ಮಿ ಇಲ್ಲ.ಇದನ್ನೆಲ್ಲಾ ನೋಡಿದರೆ ನಮ್ಮ ವೈದ್ಯಕೀಯ ಕ್ಷೇತ್ರ ಎತ್ತ 
ಸಾಗುತ್ತಿದೆ ಎಂದು ನೆನೆದು ಆತಂಕವಾಗುತ್ತದೆ . ಮೊನ್ನೆ ಒಬ್ಬ ರೋಗಿ ದೊಡ್ಡದೊಂದು ಕೈಚೀಲ ಹಿಡಿದು 
ಬಂದರು.ಬಂದವರೇ "ಸಾರ್ ಬಿ.ಪಿ.ದು ಅರವತ್ತು ಮಾತ್ರೆ ,ಶುಗರ್ ದು ಅರವತ್ತು ಮಾತ್ರೆ,ಹಾಗೇ
 ಬಿ.ಕಾಂಪ್ಲೆಕ್ಸ್ ಮೂವತ್ತು ಮಾತ್ರೆ ಬರೆದು ಕೊಡಿ"ಎಂದರು."ಸರಿ"ಎಂದು ಅವರ ಕಾರ್ಡಿನಲ್ಲಿ ಅವರು 
ಕೇಳಿದ ಮಾತ್ರೆಗಳನ್ನು ಬರೆದು ಕೊಟ್ಟೆ."ಸಾರ್ ಗ್ಯಾಸಿಂದು ಮೂವತ್ತು ಮಾತ್ರೆ ಮತ್ತು ಗ್ಯಾಸಿನ ಒಂದು
 ಬಾಟಲಿ ಬರೆದು ಕೊಡಿ "ಎಂದರು.ಸರಿ ಅವರು ಕೇಳಿದ್ದನ್ನು ಬರೆದು ಕೊಟ್ಟು ಮತ್ತೇನು 
ಎನ್ನುವಂತೆ ಅವರ ಮುಖ ನೋಡಿದೆ."ಸಾರ್ ನೋವಿನ ಮಾತ್ರೆ ಮೂವತ್ತು,ನೋವಿನ ಟ್ಯೂಬ್ ಎರಡು"
ಎಂದರು.ಹಿಂದೊಮ್ಮೆ "ಇಷ್ಟೆಲ್ಲಾ ಔಷಧಿ ಒಳ್ಳೆಯದಲ್ಲಮ್ಮಾ" ಎಂದದ್ದಕ್ಕೆ ನನಗೆ ಕೇಳುವಂತೆಯೇ
"ಇವರೇನು ತಮ್ಮ ಮನೆಯಿಂದ ಕೊಡ್ತಾರಾ?"ಎಂದು ಸಿಟ್ಟಿನಿಂದ ಗೊಣಗುತ್ತಾ ಹೋಗಿದ್ದರು.
ಆ ಮಾತುಗಳು ನೆನಪಾಗಿ,ಮರು ಮಾತಿಲ್ಲದೇ ಅವರು ಹೇಳಿದ ಔಷಧಿಗಳನ್ನು ಬರೆಯುತ್ತಾ ಹೋದೆ.
ಇಷ್ಟೇನಾ,ಇನ್ನೇನಾದರೂ ಬಾಕಿ ಇದೆಯಾ ಎನ್ನುವಂತೆ ಅವರ ಮುಖ ನೋಡಿದೆ. 
 ಉಹ್ಞೂ ......ಅವರ ಲಿಸ್ಟ್ ಇನ್ನೂ ಮುಗಿದಿರಲಿಲ್ಲ."ಒಂದು ಪ್ರೋಟೀನ್ ಪುಡಿ ಡಬ್ಬ,ಮತ್ತು 
ಮೂವತ್ತು ಕ್ಯಾಲ್ಶಿಯಂ ಮಾತ್ರೆ ಬರೆದು ಕೊಡಿ "ಎಂದರು.ಸರಿ ಅವರು ಇಷ್ಟು ದೊಡ್ಡ ಕೈ ಚೀಲ
 ಏಕೆ ತಂದಿದ್ದಾರೆ ಎನ್ನುವುದು ಅರ್ಥವಾಯಿತು.ಸರಿ ಇನ್ನೇನು ಅವರ ಲಿಸ್ಟ್ ಮುಗಿಯಿತು 
ಎಂದು ಕೊಂಡು ಅವರ ಮೆಡಿಕಲ್ ಕಾರ್ಡ್ ಅನ್ನು ಅವರ ಕೈಗೆ ಕೊಟ್ಟೆ. ಅವರಿಗೆ ಇನ್ನೂ
 ತೃಪ್ತಿ ಯಾದಂತೆ ಕಾಣಲಿಲ್ಲ."ಸಾರ್ ನೆನ್ನೆಯಿಂದಾ ತುಂಬಾ ಸುಸ್ತು.ಒಂದು ಡ್ರಿಪ್ ಹಾಕ್ತೀರಾ?"
ಎಂದರು. ನನಗೇ ತಲೆ ತಿರುಗಿದಂತಾಗಿ ನಾನೇ ಡ್ರಿಪ್ ಹಾಕಿಸಿಕೊಳ್ಳುವ ಪರಿಸ್ಥಿತಿ
 ಬಂದಿದೆಯೇನೋ ಎನ್ನುವ ಅನುಮಾನ ಬಂತು !!!! ನಮ್ಮಂತಹ ಅಸಹಾಯಕ ವೈದ್ಯರನ್ನು 
ಆ ದೇವರೇ ಕಾಪಾಡಬೇಕು !!!! ಯಾರಿಗೆ ಹೇಳೋಣ ನಮ್ಮ..........ಪ್ರಾಬ್ಲಮ್ಮು !!!!

Thursday, July 18, 2013

" ಹೀಗೊಂದು ಕಸದ ತೊಟ್ಟಿಯ ಕಥೆ !!!"

ಅವನು ಆ ಊರಿಗೇ ಒಬ್ಬ ದೊಡ್ಡ ಶ್ರೀಮಂತ.ಅವನ ಬಳಿ ಬಂಗಲೆ,ಗಾಡಿ,ಆಳು ಕಾಳು,ಸಾಕಷ್ಟು ಹಣ ಎಲ್ಲವೂ ಇವೆ.ಆದರೂ ಅವನನ್ನು ಏನೋ ಒಂದು ಕೊರತೆ ಸದಾ ಕಾಡುತ್ತದೆ.ಇದ್ದಕ್ಕಿದ್ದಂತೆ ಭಾವುಕನಾಗುತ್ತಾನೆ.

 ಊರಿನ ಆ ಒಂದು ರಸ್ತೆ  ಬದಿಯ ಗಬ್ಬು ನಾರುವ ಕಸದ ತೊಟ್ಟಿ ಯೊಂದರ  ಬಳಿ ಆಗಾಗ ಹೊಗುತ್ತಾನೆ.ಅವನ ಕಣ್ಣುಗಳು ಅವನು ಅಲ್ಲಿ ಏನೋ ಕಳೆದು ಕೊಂಡವನಂತೆ ಹುಡುಕುತ್ತವೆ. ಮತ್ತೆ ಸ್ವಲ್ಪ ಸಮಯದ ನಂತರ ಸುಸ್ತಾದವನಂತೆ ಕಾರಿನಲ್ಲಿ ಕುಳಿತು ಮನೆಗೆ ಮರಳುತ್ತಾನೆ.

ಊರಿನವರೆಲ್ಲಾ ಅವನನ್ನು ನೋಡಿ ಅವನಿಗೆಲ್ಲೋ ಸ್ವಲ್ಪ ತಲೆ ಕೆಟ್ಟಿದೆ ಎಂದು ಆಡಿಕೊಳ್ಳುತ್ತಾರೆ. ಅವನು ನನಗೂ ಅಲ್ಪ ಸ್ವಲ್ಪ ಪರಿಚಯ. ಆಗಾಗ ಸಣ್ಣ ಪುಟ್ಟ ಚಿಕಿತ್ಸೆಗೆ ನನ್ನ ಆಸ್ಪತ್ರೆಗೆ ಬರುತ್ತಾನೆ.

ನಾನು ರೋಗಿಗಳ ವೈಯಕ್ತಿಕ ವಿಷಯಗಳಲ್ಲಿ ಹೆಚ್ಚು ತಲೆ ಹಾಕುವುದಿಲ್ಲ. ಆದರೆ ಒಮ್ಮೆ ಅವನೊಬ್ಬನೇ ಇದ್ದಾಗ ಕುತೂಹಲ ಹತ್ತಿಕ್ಕಲಾರದೇ ಅವನನ್ನು "ಆ ಕಸದ ತೊಟ್ಟಿಯಲ್ಲಿ ಏನು ಹುಡುಕುತ್ತೀರಿ? ಏನನ್ನಾದರೂ ಕಳೆದು ಕೊಂಡಿದ್ದೀರಾ ಹೇಗೆ ?"ಎಂದು ಕೇಳಿಯೇ ಬಿಟ್ಟೆ.

ಅವನು ನನ್ನಿಂದ ಈ ಪ್ರಶ್ನೆ ನಿರೀಕ್ಷಿಸಿರಲಿಲ್ಲವೆಂದು ಕಾಣುತ್ತೆ.ಸ್ವಲ್ಪ ಹೊತ್ತು ಮೌನದಲ್ಲಿ ಕಳೆದು ಹೋದ. ಸರಿಯಾದ ಪದಗಳಿಗಾಗಿ ತಡಕಾಡುವಂತಿತ್ತು ಅವನ ಚಹರೆ. ನಾನು ಅವನನ್ನು  ಯಾಕಾದರೂ ಈ ಪ್ರಶ್ನೆ ಕೇಳಿದೆನೋ ಎಂದು ಕಸಿವಿಸಿಗೊಂಡೆ.

ನಂತರ ಅವನು ನಿಧಾನವಾಗಿ ತನ್ನ ಕಥೆ ಹೇಳತೊಡಗಿದ. "ಸಾರ್ ಊರಿನ ಜನ ನನ್ನ ಬಗ್ಗೆ ಏನೆಲ್ಲಾ ಆಡಿ ಕೊಳ್ಳುತ್ತಾರೆ ಎನ್ನುವುದು ನನಗೆ ಗೊತ್ತಿದೆ. ನಾನು ಸಣ್ಣವನಾಗಿದ್ದಾಗಲಿಂದಲೂ ನನ್ನನ್ನು ಬೆಳೆಸಿದ್ದು ಗೋವಿಂದಜ್ಜನೇ. ನಾನು ಅಪ್ಪ ಅಮ್ಮನ ಬಗ್ಗೆ ಕೇಳಿದಾಗಲೆಲ್ಲಾ ,ನೀನು ಸಣ್ಣವನಿದ್ದಾಗಲೇ ನಿನ್ನ ಅಪ್ಪ ಅಮ್ಮ ತೀರಿಕೊಂಡರು ಎನ್ನುತ್ತಿದ್ದ. ಅಜ್ಜ ಸಾಯುವುದಕ್ಕೆ ಸ್ವಲ್ಪ ದಿನ ಮುಂಚೆ ,ನನ್ನ ಅಪ್ಪ ಅಮ್ಮ ಯಾರೆಂದು ತನಗೆ ಗೊತ್ತಿಲ್ಲವೆಂದೂ,ನಾನು ತೊಟ್ಟಿಯಲ್ಲಿ ಸಿಕ್ಕ ಹಸುಗೂಸೆಂದೂ,ಅಳುವಿನ ಶಬ್ದ ಕೇಳಿ ತಾನು ಎತ್ತಿಕೊಂಡು ಬಂದು ಸಾಕಿದುದಾಗಿಯೂ ನಿಜ ಹೇಳಿದ.

ನನಗೆ ಆಗಾಗ ನನ್ನ ಅಮ್ಮನ ನೆನಪಾಗುತ್ತದೆ ಸರ್.ಪಾಪ ಏನು ಕಷ್ಟದಲ್ಲಿ ಇದ್ದಳೋ,ನನ್ನನ್ನು ತೊಟ್ಟಿಯಲ್ಲಿ ಬಿಟ್ಟು ಹೋಗುವಾಗ ಎಂತಹ ಸಂಕಟ ಅನುಭವಿಸಿದಳೋ.ನೆನೆಸಿಕೊಂಡರೆ  ಬಹಳ ನೋವಾಗುತ್ತೆ ಸರ್.ಅಮ್ಮನ  ನೆನಪಾದಗಲೆಲ್ಲಾ ಆ ತೊಟ್ಟಿಯ ಬಳಿ ಹೋಗುತ್ತೀನಿ ಸರ್"ಎಂದು ಮಾತು ಮುಗಿಸಿದ.ಅವನು ಅತ್ತು ಎದೆ ಹಗುರ ಮಾಡಿ ಕೊಂಡ.ನನ್ನ ಎದೆ  ಭಾರವಾಗಿತ್ತು !!!

ಆಧಾರ:"ಕಥೆಗಳಲ್ಲದ ಕಥೆಗಳು"ಪುಸ್ತಕದ ಒಂದು ಕಥೆ.

Sunday, July 7, 2013

"ಅಂತರಂಗದಲ್ಲೊಂದು.... ಕುರುಕ್ಷೇತ್ರ !!!!"

ನೆನ್ನೆ ಶನಿವಾರ ದಿನಾಂಕ ೬.೭.೨೦೧೩ ರರ "ಪ್ರಜಾವಾಣಿ"ದಿನಪತ್ರಿಕೆಯ "ಭೂಮಿಕಾ" ಪುರವಣಿಯಲ್ಲಿ ,ಎರಡು ಒಳ್ಳೆಯ ಲೇಖನಗಳಿವೆ.ಮೊದಲನೆಯದು ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರ ವಿ.ಬಾಲಕೃಷ್ಣನ್ ರವರ "ಆಧುನಿಕ ಕುರುಕ್ಷೇತ್ರ".
ಈ ಲೇಖನದಲ್ಲಿ ಲೇಖಕರು ವ್ಯಕ್ತಿಯ ಮನಸ್ಸಿನಲ್ಲಿ ಪ್ರತಿಕ್ಷಣವೂ ನಡೆಯುವ ಮಾನಸಿಕ ತುಮುಲಗಳ ಬಗ್ಗೆ ಬಹಳ ಸರಳವಾಗಿ ವಿಶ್ಲೇಷಣೆ ಮಾಡಿದ್ದಾರೆ.

ಎರಡನೇ ಲೇಖನ ಭರತ್ ಮತ್ತು ಶಾಲನ್ ಸವೂರ್ ರವರ "ಸಂಘರ್ಷ ನಿವಾರಿಸಿ"ಎನ್ನುವ ಲೇಖನ.ಅಚ್ಚರಿ ಎಂದರೆ ಇದೂ ಕೂಡ ಮನಸ್ಸಿನಲ್ಲಿ ನಡೆಯುವ ಆಂತರಿಕ ಸಂಘರ್ಷದ ಬಗ್ಗೆಯೇ !! ಡಬಲ್ ಧಮಾಕ .....!!! ಒಂದೇ ಸಲಕ್ಕೆ ಎರಡು ಸುಂದರ ವ್ಯಕ್ತಿತ್ವ ವಿಕಸನ ಲೇಖನಗಳು!!!! ಎರಡನೇ ಲೇಖನದ ಆಯ್ದ ಕೆಲ ಭಾಗಗಳು ಇಂತಿವೆ.ಪೂರ್ಣ ಮೂಲ ಲೇಖನ ಓದುವುದು ಹೆಚ್ಚು ಲಾಭಕರ ಎಂದು ನನ್ನ ಅನಿಸಿಕೆ.

ಸಾಮಾನ್ಯವಾಗಿ ಯಾವುದೇ ಸಂಘರ್ಷವನ್ನು ನಾವು ಬಾಹ್ಯದಲ್ಲಿ ಪರಿಹರಿಸಿಕೊಳ್ಳಲು ಯತ್ನಿಸುತ್ತೇವೆ.ನಮಗೂ ಮತ್ತೊಬ್ಬರಿಗೂ ಸಂಘರ್ಷವಾದಾಗ ಎಲ್ಲವನ್ನೂ  ನಮ್ಮ ಅಹಂಕಾರದ ಕನ್ನಡಕದ ಮೂಲಕವೇ ನೋಡುತ್ತೇವೆ .ನಾನೇ ಸರಿ ಎಂದು ವಾದಿಸುತ್ತೇವೆ.ನಮ್ಮದೇ ತಪ್ಪಿದ್ದರೂ ಒಪ್ಪಿ ಕೊಳ್ಳಲು ನಾವು ಸಿದ್ಧರಿರುವುದಿಲ್ಲ.ಅಕಸ್ಮಾತ್ತಾಗಿ ಕ್ಷಮೆ ಕೇಳುವ ಸಂದರ್ಭ ಬಂದರೂ ಕಾಟಾಚಾರಕ್ಕೆ ಒಲ್ಲದ ಮನಸ್ಸಿನಿನಿಂದ ಚುಟುಕಾಗಿ ಕ್ಷಮೆ ಕೇಳುತ್ತೇವೆ! ಮುಖದ ಮೇಲೆ ಒಂದು ಔಪಚಾರಿಕ ನಗು ತಂದು ಕೊಳ್ಳು ತ್ತೇವೆ !!!ಅಂತಿಮವಾಗಿ ಯಾರೂ ಸಂತಸದಿಂದ ಇರುವುದಿಲ್ಲ !!!ಮನಸ್ಸಿನಲ್ಲಿ ಅತೃಪ್ತಿ ಕುದಿಯುತ್ತಿರುತ್ತದೆ.
ಹೃದಯದಲ್ಲಿ ಕಹಿ ಉಳಿದುಬಿಡುತ್ತದೆ.

ನಿಜವಾದ ಸಂಘರ್ಷ ಪ್ರತಿ ವ್ಯಕ್ತಿಯ ಅಂತರಂಗದಲ್ಲಿಯೇ ನಡೆಯುತ್ತಿರುತ್ತದೆ.ಆಗಿದ್ದನ್ನು ಒಪ್ಪಿಕೊಳ್ಳಲು ಮನಸ್ಸು ತಯಾರಿರುವುದಿಲ್ಲ!ನಮ್ಮ ಅಹಂಕಾರ ,ತಾನು ಎಣಿಸಿದಂತೆಯೇ ಎಲ್ಲವೂ ನಡೆಯಬೇಕು ಎನ್ನುವ  ಅತೃಪ್ತಿಯನ್ನು ಹುಟ್ಟು ಹಾಕುತ್ತದೆ.ಅಂತರಂಗದ ಅಸಮಾಧಾನ,ಸಿಡುಕು,ನಾನಾ ರೋಗಗಳಿಗೆ ಮೂಲ ಕಾರಣ.ಪ್ರತಿ ವ್ಯಕ್ತಿಯೂ ತನ್ನ ಮನಸ್ಸಿನಿಂದ ಮತ್ತು ಹೃದಯದಿಂದ ಸಿಡುಕನ್ನು ತೆಗೆದು ಹಾಕಿ ಆ ಜಾಗದಲ್ಲಿ ಸದಾ ಶಾಂತಿ ,ಸಮಾಧಾನ,ತಾಳ್ಮೆ ,ನೆಮ್ಮದಿ ನೆಲಸುವಂತೆ ಮಾಡಬೇಕು.ದಿನ ನಿತ್ಯದ ಧ್ಯಾನ ,ಪ್ರಾಣಾಯಾಮ,ಇದಕ್ಕೆ ಸೂಕ್ತ ಮದ್ದು.ಮನಸ್ಸ್ಸಿನ ಆರೋಗ್ಯ ದೇಹದ ಆರೋಗ್ಯಕ್ಕೆ ಮೂಲ ಕಾರಣ.ಹಾಗಾಗಿ ನಿಮ್ಮ ಆಂತರಿಕ ಸಂಘರ್ಶಗಳನ್ನು ಮೊದಲು ನಿವಾರಿಸಿಕೊಂಡು ,ನಿಮ್ಮ ಮನಸ್ಸನ್ನು ಚೆನ್ನಾಗಿ ನೋಡಿಕೊಳ್ಳಿ.ನಮಸ್ಕಾರ.

Tuesday, July 2, 2013

"ಸಂಸಾರ !!!! ಗಡಿಯಾರ !!!!"


ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!

Saturday, June 29, 2013

"ಸಾಮಾನ್ಯನೊಬ್ಬನ ಅಸಾಮಾನ್ಯ ಸಾಹಸ ಗಾಥೆ !!!! "

ಅವನ ಹೆಸರು ದಶರಥ್ ಮಾಂಜಿ.ಅವನೊಬ್ಬ ಸಾಧಾರಣ ಅನಕ್ಷರಸ್ಥ ,ಹಿಂದುಳಿದ ವರ್ಗದ ಕೂಲಿ ಕಾರ್ಮಿಕ.ಆದರೆ ಅವನು ಸಾಧಿಸಿದ ಕೆಲಸ ಅದ್ಭತ ಮತ್ತು ಅಸಾಧಾರಣ!!!! ನಮ್ಮ ದೇಶದಲ್ಲೇ ಏಕೆ ,ಪ್ರಪಂಚದಲ್ಲೇ ಅಂತಹ ದಾಖಲೆಯನ್ನು ಯಾರೂ ಸಾಧಿಸಿಲ್ಲ.ಅವನ ಸಾಧನೆಯನ್ನು ಶಹಜಾನ್  ತಾಜ್ ಮಹಲ್ ಕಟ್ಟಿದ ಸಾಧನೆಗಿಂತ ಹಿರಿದಾದ ಸಾಧನೆ ಎನ್ನುವವರಿದ್ದಾರೆ.

ದಶರಥ್ ಮಾಂಜಿಯ ಊರು ಬಿಹಾರದ ಗಯಾ ಜಿಲ್ಲೆಯ ಅತೀ ಹಿಂದುಳಿದ ಹಳ್ಳಿ ಘೆಲೋರ್ .ಹಳ್ಳಿಯಲ್ಲಿ ವೈದ್ಯಕೀಯ ಸೌಲಭ್ಯವಾಗಲೀ ಅಥವಾ ಇನ್ನಿತರ ಯಾವುದೇ ಸೌಲಭ್ಯವಾಗಲೀ ಇರಲಿಲ್ಲ.ಹಳ್ಳಿಯ ಮುಂದೆ ದೊಡ್ಡ ಕಲ್ಲಿನ ಬೆಟ್ಟವೊಂದು ಇವರ ಎಲ್ಲಾ ಸೌಕರ್ಯಗಳಿಗೂ ಅಡ್ಡಿಯಾಗಿತ್ತು.ಹತ್ತಿರದ ಊರು ವಜೀರ್ ಗಂಜ್ ಗೆ ಹೋಗಲು ಬೆಟ್ಟವನ್ನು ಬಳಸಿಕೊಂಡು ಎಪ್ಪತ್ತು ಕಿಲೋಮೀಟರ್ ದಾರಿ ಕ್ರಮಿಸ ಬೇಕಾಗಿತ್ತು.

ಒಂದು ಬಾರಿ ದಶರಥ್ ಮಾಂಜಿಯ ಹೆಂಡತಿಗೆ ತೀವ್ರ ಅನಾರೋಗ್ಯವಾಗಿ ,ಸಮಯಕ್ಕೆ ಸರಿಯಾಗಿ ಅವಳಿಗೆ ವೈದ್ಯಕೀಯ ಸೌಲಭ್ಯ ಕೊಡಿಸಲು ಸಾಧ್ಯವಾಗದೆ ತೀವ್ರ ತೊಂದರೆ ಅನುಭವಿಸಬೇಕಾಯಿತು.ಹೆಂಡತಿಯನ್ನು ಬಹಳವಾಗಿ ಪ್ರೀತಿಸುತ್ತಿದ್ದ ದಶರಥ್ ಮಾಂಜಿಯ ಮೇಲೆ ಈ ಘಟನೆ ಬಹಳ ಆಘಾತಕಾರಿ ಪರಿಣಾಮ ಬೀರಿತು.ಆ ರಾತ್ರಿಯೇ ದಶರಥ್ ಮಾಂಜಿ ಒಂದು ನಿರ್ಧಾರಕ್ಕೆ ಬಂದ.ತನ್ನ ಬಳಿ ಇದ್ದ ಆಡುಗಳನ್ನು ಮಾರಿ ,ಬೆಟ್ಟ ಕಡಿಯುವ ಸಲಕರಣೆಗಳಾದ ,ಸುತ್ತಿಗೆ,ಉಳಿ,ಪಿಕಾಸಿ,
ಹಾರೆ,ಸಲಿಕೆ ಮುಂತಾದುವುಗಳನ್ನು ಖರೀದಿ ಮಾಡಿದ.

ಮಾರನೇ ದಿನದಿಂದಲೇ ಬೆಟ್ಟ ಕಡಿದು ದಾರಿ ಮಾಡುವ ಕೆಲಸವನ್ನು ಒಬ್ಬನೇ ಶುರು ಮಾಡಿದ.ಇದು ಸುಮಾರು 1960 ರ  ಶುರು.ಇವನ ಕೆಲಸವನ್ನೂ,ಇವನ ಮಾತನ್ನೂ ಕೇಳಿ ಊರಿನ ಜನ ಇವನನ್ನು ಹುಚ್ಚನೆಂದರು."ಒಬ್ಬನೇ ಬೆಟ್ಟ ಕಡಿಯಲು ಸಾಧ್ಯವೇ?"ಎಂದು ನಕ್ಕರು,ಅಪಹಾಸ್ಯ ಮಾಡಿದರು.ಆದರೆ ಇದು ಯಾವುದರಿಂದಲೂ ದಶರಥ್ ವಿಚಲಿತ ನಾಗಲಿಲ್ಲ.ಅವನ ನಿರ್ಧಾರ ಅಚಲವಾಗಿತ್ತು. ಹಗಲು ರಾತ್ರಿ ಎನ್ನದೇ ಕಲ್ಲಿನ ಬೆಟ್ಟ ಕಡಿದು ರಸ್ತೆ ಮಾಡುವ ಕೆಲಸದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ.ಊರು ಬಿಟ್ಟು ಬೆಟ್ಟದ ಬಳಿಯೇ ಒಂದು ಗುಡಿಸಿಲು ಕಟ್ಟಿಕೊಂಡ.ಬರ ಬರುತ್ತಾ ಜನಕ್ಕೆ ಅವನ ಮಹಾನ್ ಕಾರ್ಯದ ಅರಿವಾಗಿ ಅವನಿಗೆ ನೀರು,ಆಹಾರ ತಂದು ಕೊಡುವ ಸಣ್ಣ ಪುಟ್ಟ ಸಹಾಯ ಮಾಡ ತೊಡಗಿದರು. ಸತತ ಇಪ್ಪತ್ತೆರಡು ವರ್ಷ ಏಕಾಂಗಿಯಾಗಿ ಕೆಲಸಮಾಡಿದ ದಶರಥ್ ಮಾಂಜಿ ,1982 ರಲ್ಲಿ ತನ್ನ ಮಹಾನ್ ಕಾರ್ಯದಲ್ಲಿ ಸಫಲನಾಗಿದ್ದ.ಆ ಕಲ್ಲಿನ ಬೆಟ್ಟದಲ್ಲಿ ಒಂದು ಕಿಲೋಮೀಟರ್ ಉದ್ದದ ,ಮೂವತ್ತು ಅಡಿ ಅಗಲದ ,ಇಪ್ಪತ್ತೈದು ಅಡಿ ಎತ್ತರದ ರಸ್ತೆ ನಿರ್ಮಾಣವಾಗಿತ್ತು.ಹತ್ತಿರದ ಊರು ವಜೀರ್ ಗಂಜಿನ ಎಪ್ಪತ್ತು ಕಿಲೋಮೀಟರ್ ದಾರಿ ಬರೀ ಏಳು ಕಿಲೋ ಮೀಟರ್ ಗೆ ಇಳಿದಿತ್ತು.ಆದರೆ ಅವನ ಈ ಮಹಾನ್ ಸಾಧನೆಯನ್ನು ಕಾಣಲು ಅವನ ಹೆಂಡತಿ ಫಾಗುಣೆ ದೇವಿ ಬದುಕಿರಲಿಲ್ಲ.

ನಂತರ ಬಿಹಾರ್ ಸರ್ಕಾರ ಅವನನ್ನು ಸನ್ಮಾನಿಸಿತು.ಇಂತಹ ,ಯಾರೂ  ಕಂಡು ,ಕೇಳಿರದ,ಸಾಹಸವನ್ನು ಏಕಾಂಗಿಯಾಗಿ ಮಾಡಿದ ದಶರಥ್ ಮಾಂಜಿ ಆಗಸ್ಟ್ 17,2007 ರಲ್ಲಿ ತೀರಿಕೊಂಡ.ಹೆಂಡತಿಯ ಮೇಲಿನ ಅಪ್ರತಿಮ ಪ್ರೀತಿ ಕಲ್ಲಿನ ಬೆಟ್ಟದಲ್ಲಿಯೇ ಒಂದು ದಾರಿ ನಿರ್ಮಿಸಿ ,ಜಗತ್ತೇ ವಿಸ್ಮಯ ಪಡುವಂತೆ ಮಾಡಿದೆ.ದಶರಥ್ ಮಾಂಜಿಯ ಕಥೆಯನ್ನು  ಹಲವಾರು ನಿರ್ಮಾಪಕರು ಸಿನಿಮಾ ತಯಾರಿಸಿದ್ದಾರೆ.ಅವನ ಹೆಸರಿನಲ್ಲಿ ಅವನ ಹಳ್ಳಿಯಲ್ಲೊಂದು ಆಸ್ಪತ್ರೆಯಾಗಿದೆ.ಈಗ ಆ ರಸ್ತೆಯಲ್ಲಿ ಹಲವಾರು ವಾಹನ ಗಳು ಓಡಾಡುತ್ತವೆ.ಈಗ ಆ ಹಳ್ಳಿಯ ಜನ 'ಬಾಬ'ದಶರಥ್ ಮಾಂಜಿಯನ್ನು ಪ್ರೀತಿಯಿಂದ ಸ್ಮರಿಸಿಕೊಳ್ಳುತ್ತಾರೆ. ನಿಜಕ್ಕೂ ದಶರಥ್ ಮಾಂಜಿಯದು ಒಂದು ಸಾರ್ಥಕ ಜೀವನವಲ್ಲವೇ!!!? ಸಣ್ಣ ಪುಟ್ಟ ಸವಾಲಿಗೂ ಎದೆ ಗುಂದುವ ನಮ್ಮಂತಹ ಸಾಮಾನ್ಯರಿಗೆ ದಶರಥ್ ಮಾಂಜಿ ಆದರ್ಶ ಪ್ರಾಯನಾಗಿದ್ದಾನೆ!!! ನಮಸ್ಕಾರ.

Thursday, June 27, 2013

"ಚಾಕೊಲೇಟ್ ಕೋನ್ ಐಸ್ ಕ್ರೀಂ ಕಥೆ !!!!"

ಅವನೊಬ್ಬ ಸುಮಾರು ಹದಿನಾಲಕ್ಕು ವರ್ಷದ ಕೂಲಿ ಹುಡುಗ. ಅವನಿಗೆ ಬಹಳ ದಿನಗಳಿಂದ 'ಚಾಕೊಲೇಟ್ ಕೋನ್ ಐಸ್ ಕ್ರೀಂ' ತಿನ್ನ ಬೇಕೆಂಬ ಆಸೆ ಇತ್ತು. ಒಂದುದಿನ ತನ್ನ ಬಳಿ  ಕೂಡಿಟ್ಟಿದ್ದ ಚಿಲ್ಲರೆ ಹಣವನ್ನೆಲ್ಲಾ ಸೇರಿಸಿ, ತಾನು ದಿನವೂ ಹಾದು  ಹೋಗುತ್ತಿದ್ದ ಪ್ರತಿಷ್ಟಿತ ಹೋಟೆಲ್ ಒಂದರಲ್ಲಿ ಹೋಗಿ ಕುಳಿತ. ಅವನು  ಅಂತಹ ಹೋಟೆಲ್ ಗೆ ಹೋಗಿದ್ದು ಅದೇ ಮೊದಲನೇ ಸಲವಾದ್ದರಿಂದ ಸ್ವಲ್ಪ ಗಾಭರಿ ಗೊಂಡಿದ್ದ. ಹಣೆಯಲ್ಲಿ ಬೆವರಿತ್ತು.ಅವನು ಹಾಕಿಕೊಂಡಿದ್ದ  ಕೊಳಕು ಬಟ್ಟೆಅಲ್ಲಲ್ಲಿ ಹರಿದಿತ್ತು.


ಸಮವಸ್ತ್ರ ಧರಿಸಿದ್ದ ವೇಯ್ಟರ್  ಬಂದು ಟೇಬಲ್ ಮೇಲೆ ಒಂದು ನೀರಿನ ಲೋಟ ಕುಕ್ಕಿ ,ಆ ಕೂಲಿ ಹುಡುಗನನ್ನು ಇವನು ಇಲ್ಲಿ ಯಾಕೆ ಬಂದ ಎನ್ನುವಂತೆ ಕೆಕ್ಕರಿಸಿ ನೋಡಿ,"ಏನೋ.... ,ಏನು ಬೇಕು ?"ಎಂದು ಒರಟು ದನಿಯಲ್ಲಿ ಕೇಳಿದ. ಅದಕ್ಕೆ ಆ ಹುಡುಗ "ಅಂಕಲ್ ನನಗೆ ಚಾಕೊಲೇಟ್ ಕೋನ್ ಐಸ್ ಕ್ರೀಂ  ತಿನ್ನ ಬೇಕು ಅಂತ ಆಸೆ. ಅದನ್ನು ಕೊಡಿ ಅಂಕಲ್"ಎಂದ. ವೇಯ್ಟರ್ "ಅದಕ್ಕೆ ಇಪ್ಪತ್ತೈದು ರೂಪಾಯಿ. ಅಷ್ಟು ಹಣ ನಿನ್ನ ಹತ್ತಿರ ಇದೆಯಾ?"ಎಂದ. ಹುಡುಗ ತಾನು ತಂದಿದ್ದ ಚಿಲ್ಲರೆ ಹಣವನ್ನು ಟೇಬಲ್ ಟೇಬಲ್ ಮೇಲೆ ಹಾಕಿ ಎಣಿಸ ತೊಡಗಿದ. "ವೇಯ್ಟರ್ ಸಿಟ್ಟಿನಿಂದ "ಹಣ ಇಲ್ಲದಿದ್ದರೆ ಇಲಿಗ್ಯಾಕೆ ಬರಬೇಕು"ಎಂದು ಗೊಣಗುತ್ತಾ ಇನ್ನೊಂದು ಟೇಬಲ್ ಗೆ ಹೊದ. ಸ್ವಲ್ಪ ಹೊತ್ತಿನ ನಂತರ ಹುಡುಗನ ಬಳಿ  ಬಂದು ಏನು ಎನ್ನುವಂತೆ ನೋಡಿದ. ಹುಡುಗ ವೇಯ್ಟರ್ ನನ್ನು ನೋಡುತ್ತಾ "ಅಂಕಲ್,ನನ್ನ ಹತ್ತಿರ ಇಪ್ಪತ್ತೈದು ರೂಪಾಯಿ ಇಲ್ಲ. ಇಪ್ಪತ್ತು ರೂಪಾಯಿಗೆ ಯಾವುದಾದರೂ ಐಸ್  ಕ್ರೀಂ ತಂದು ಕೊಡಿ" ಎಂದ. ವೇಯ್ಟರ್ ಮತ್ತೆ ಸಿಟ್ಟಿನಿಂದ ಏನೋ ಗೊಣಗಿಕೊಂಡು ಹೋಗಿ ಕಪ್ ಐಸ್ ಕ್ರೀಂ ಒಂದನ್ನು ತಂದಿಟ್ಟು ಹೊದ.

ಹುಡುಗ ಐಸ್ ಕ್ರೀಂ  ತಿಂದು ವೇಯ್ಟರ್  ತಂದಿಟ್ಟ ಬಿಲ್ಲಿನ ಜೊತೆ ಹಣ ಇಟ್ಟು  ಹೊರಗೆ  ಹೋದ . ವೇಯ್ಟರ್ ಬಿಲ್ಲಿನ ಹಣ ತೆಗೆದು ಕೊಳ್ಳಲು ಬಂದವನು ಅವಾಕ್ಕಾಗಿ ನಿಂತ. ಅಲ್ಲಿ ಬಿಲ್ಲಿನ ಹಣ ಇಪ್ಪತ್ತು ರೂಪಾಯಿಯ ಜೊತೆಗೆ,ವೇಯ್ಟರ್ ಗೆಂದು ಐದು ರೂಪಾಯಿ ಟಿಪ್ಸ್ ಅನ್ನೂ ಸೇರಿಸಿ ಇಪ್ಪತ್ತೈದು ರೂಪಾಯಿ ಇಟ್ಟಿದ್ದ ಹುಡುಗ !!! ವೇಯ್ಟರ್ ಗೆ ತಾನು  ಹುಡುಗ ನೊಡನೆ ಒರಟಾಗಿ  ನಡೆದು ಕೊಂಡ ರೀತಿಯ   ಬಗ್ಗೆ ತುಂಬಾ ಪಶ್ಚಾತ್ತಾಪ ವಾಗಿತ್ತು. ತನಗೆ ಅರಿವಿಲ್ಲದಂತೆ ಅವನ ಕಣ್ಣುಗಳಲ್ಲಿ ನೀರಿತ್ತು!!!!

ಇದರಲ್ಲಿ ನಮ್ಮೆಲ್ಲರಿಗೂ ಒಂದು ಪಾಠವಿದೆ ಅಲ್ಲವೇ? ನಾವು ಬಾಹ್ಯ ರೂಪಕ್ಕೆ ಬೆಲೆ ಕೊಡದೆ ಆಂತರಿಕ ಸೌಂದರ್ಯಕ್ಕೆ ಬೆಲೆ ಕೊಡ ಬೇಕಲ್ಲವೇ ? ಎಲ್ಲರಿಗೂ ನಮಸ್ಕಾರ.

Wednesday, June 26, 2013

" ಹೀಗೊಂದು ಅದ್ಭುತ ಝೆನ್ ಕಥೆ !!!!"

ಹೀಗೊಂದು ಝೆನ್ ಕಥೆ.ಗುರು ಮತ್ತು ಶಿಷ್ಯರಿಬ್ಬರೂ ಒಂದು ಮುಂಜಾನೆ,ತುಂಬಿ ಹರಿಯುತ್ತಿದ್ದ ಹೊಳೆಯೊಂದನ್ನು ದಾಟಲು ಶುರು ಮಾಡಿದರು. ಸುಂದರ ಯುವತಿಯೊಬ್ಬಳು ಶಿಷ್ಯನನ್ನು,ಹೊಳೆಯನ್ನು ದಾಟಲು ತನಗೆ ಸಹಾಯ ಮಾಡುವಂತೆ ಕೋರಿದಳು. ಶಿಷ್ಯ  ತಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟುವಂತಿಲ್ಲವೆಂದೂ,ಸಹಾಯ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಮುಂದೆ ನಡೆದ. ನಂತರ ಯುವತಿ ಗುರುವಿನ ಸಹಾಯವನ್ನು ಯಾಚಿಸಿದಳು.

 ಗುರು ಒಂದು  ಮಾತನ್ನೂ ಆಡದೆ ಆ ಯುವತಿಯನ್ನು ಎತ್ತಿಕೊಂಡು ಹೊಳೆಯನ್ನು ದಾಟಿಸಿ ಆಚೆ ದಡದಲ್ಲಿ ಬಿಟ್ಟು ,ತನ್ನ  ಶಿಷ್ಯ ನೊಡನೆ ಪ್ರಯಾಣ ವನ್ನು  ಮುಂದುವರಿಸಿದ. ಸಂಜೆ ಗುರು ಶಿಷ್ಯರಿಬ್ಬರೂ ಆಶ್ರಮ ಒಂದರಲ್ಲಿ ತಂಗಿದರು. ಶಿಷ್ಯ ಸಿಟ್ಟಿನಿಂದ ಗುರುವನ್ನು "ನೀವು ಮಾಡಿದ್ದು ತಪ್ಪಲ್ಲವೇ?" ಎಂದು ಪ್ರಶ್ನಿಸಿದ. ಗುರುವಿಗೆ ಶಿಷ್ಯನ ಸಿಟ್ಟಿನ ಕಾರಣ ಅರ್ಥವಾಗದೇ ,ಮುಗ್ಧತೆಯಿಂದ"ನಾನೇನು ತಪ್ಪು ಮಾಡಿದೆ?"ಎಂದು ಕೇಳಿದ.

ಅದಕ್ಕೆ ಶಿಷ್ಯ "ನೀವು ಬೆಳಿಗ್ಗೆ ಆ ಹೆಂಗಸನ್ನು ಮುಟ್ಟಿದ್ದು ತಪ್ಪಲ್ಲವೆ?ನಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟಬಹುದೇ?" ಎಂದು ಸಿಟ್ಟಿನಿಂದ ಕೇಳಿದ. ಅದನ್ನು ಕೇಳಿ ಗುರು ಗಹ ಗಹಿಸಿ ನಕ್ಕು, ಶಿಷ್ಯನನ್ನು ಉದ್ದೇಶಿಸಿ, "ಅಲ್ಲಪ್ಪಾ ಶಿಷ್ಯ ..... ,ನಾನು ಆ ಹೆಂಗಸನ್ನು ಬೆಳಿಗ್ಗೆಯೇ ಆಚೆ ದಡ ದಲ್ಲಿ ಇಳಿಸಿ ಮರೆತು ಬಿಟ್ಟೆ. ಆದರೆ ನೀನು ಅವಳನ್ನು ನಿನ್ನ ಮನಸ್ಸಿನಲ್ಲಿ ಇನ್ನೂ ಹೊತ್ತು ತಿರುಗುತ್ತಿದ್ದೀ ಯಲ್ಲಾ  !!!!"ಎಂದು ಮತ್ತೆ ನಗತೊಡಗಿದ.

ನಾವೆಲ್ಲರೂ ಆ ಶಿಷ್ಯನಂತೆಯೇ ಅಲ್ಲವೇ ?ಎಂದೋ ನಡೆದ ವಿಷಯಗಳ ಭಾರವನ್ನು ಮನಸ್ಸಿನಲ್ಲಿ  ಅನಾವಶ್ಯವಾಗಿ ಹೊತ್ತು ತಿರುಗುತ್ತಿಲ್ಲವೇ? ಈ ಕಥೆಯಲ್ಲಿ ನಮಗೆಲ್ಲಾ ಒಂದು ಅದ್ಭುತ ಪಾಠವಿದೆ ಎಂದು ಅನಿಸಿದ್ದಿರಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಮಸ್ಕಾರ.

Sunday, June 23, 2013

"ಮಾನಸಿಕ ನೆಮ್ಮದಿಗೆ 'ಕ್ಷಾಂತಿ' ಎನ್ನುವ ಮದ್ದು !!!! "

ನೆಮ್ಮದಿಯಾಗಿ ಬದುಕಲಿಕ್ಕೆ ಏನು ಬೇಕು?ನಮ್ಮಲ್ಲಿ ಬಹಳಷ್ಟು ಜನ ಯಾಕೆ ಅಶಾಂತಿಯಿಂದ ,ಅದರಿಂದ ಉಂಟಾಗುವ ದೈಹಿಕ ತೊಂದರೆಗಳಿಂದ ಜೀವನವಿಡೀ ಕಳೆಯುತ್ತೇವೆ?ನೆಮ್ಮದಿ ಅನ್ನುವುದು ಮನಸ್ಸಿಗೆ ಸಂಭಂದಿಸಿದ ಸಂಗತಿ ಎನ್ನುವುದು ಸರಳ ತಿಳಿವಳಿಕೆ. ಹಾಗಿದ್ದೂ ನಮ್ಮ ಆದ್ಯತೆ ದೈಹಿಕ ಅಗತ್ಯಗಳ ಪೂರೈಕೆಯತ್ತಲೇ ಇರುತ್ತದೆ. ಹಾಗಾಗಿ ನೆಮ್ಮದಿ ಎನ್ನುವುದು ನಮಗೆಲ್ಲಾ ಮರೀಚಿಕೆಯಾಗಿದೆ.

ಈ ವಿಷಯದ ಬಗ್ಗೆ ಬೆಳಕು ಚೆಲ್ಲುವ, ಚೇತನಾ ತೀರ್ಥಹಳ್ಳಿಯವರು ಬರೆದ "ಆತ್ಮ ಕಾಂತಿಗೆ ಕ್ಷಾಂತಿ"ಎನ್ನುವ ಸುಂದರ ಲೇಖನ ನೆನ್ನೆಯ ವಿಜಯ ಕರ್ನಾಟಕದ 'ಬೋಧಿ ವೃಕ್ಷ'ದಲ್ಲಿ ಪ್ರಕಟವಾಗಿದೆ. ಸಾಧ್ಯವಾದರೆ ಪೂರ್ತಿ ಲೇಖನ ಓದಿ. ಆ ಲೇಖನದಲ್ಲಿ ಬರುವ "ಕ್ಷಾಂತಿ"ಎನ್ನುವ ಪದದ ಬಗ್ಗೆ ನನಗೆ ಗೊತ್ತಿರಲಿಲ್ಲ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಪರಿಪೂರ್ಣತೆಯ ಪಥಿಕರ ಲಕ್ಷಣ ಗಳಲ್ಲಿ "ಕ್ಷಾಂತಿ"ಯೂ ಒಂದು . ಇದು ಅಪರೂಪದ ,ಆದರೆ ಮುಖ್ಯವಾದ ಗುಣ . ಬೌದ್ಧ ಧರ್ಮದಲ್ಲಿ ಇದಕ್ಕೆ ಹೆಚ್ಚಿನ ಒತ್ತು  ಕೊಡಲಾಗಿದೆ. ಕ್ಷಾಂತಿ ಎಂದರೆ ಕ್ಷಮಿಸುವ ಧೈರ್ಯ. ಇದು ಕೇವಲ ಕ್ಷಮಿಸುವ ಗುಣವಲ್ಲ.
ಆ ಗುಣದ ಮೂಲ ಬೀಜ . ಕ್ಷಾಂತಿ ಎಂದರೆ ಯಾವುದರಿಂದಲೂ  ಬಾಧೆಗೆ ಒಳಗಾಗದಿರುವ ಮನಸ್ಥಿತಿ !!! ಯಾವುದರಿಂದಲೂ ಹಿಮ್ಮೆಟ್ಟದೇ ದೃಢವಾಗಿ ನಿಲ್ಲುವ ಗುಣ . ಇದು ಸಹನೆ,ತಾಳ್ಮೆ ,ಧೈರ್ಯ,ದೃಢತೆ ಹಾಗೂ ಕ್ಷಮಾ ಗುಣ ಗಳ ಪ್ಯಾಕೇಜ್ ಇದ್ದಂತೆ !!! ಮೋಕ್ಷದ ಹಾದಿಯಲ್ಲಿ ಮಾತ್ರವಲ್ಲ ,ಅನು ದಿನದ ಬದುಕಿನಲ್ಲೂ "ಕ್ಷಾಂತಿ"ಯು ದಿವ್ಯ ಮಂತ್ರ ವಾಗ ಬಲ್ಲದು . ಇಂತಹ ಮನಃಸ್ಥಿತಿ ಅದ್ಭುತ ಅಲ್ಲವೇ!!!ಇದು ಸಾಧ್ಯವಾಗುವಂತಿದ್ದರೆ ಎಂತಹ ನೆಮ್ಮದಿ ಸಿಗಬಹುದು!!!! YOU JUST DON'T GET UPSET!!! YOU ARE  STRESS HARDY!!! JUST IMAGINE !!!

ಬದುಕಿನ ಓಟದಲ್ಲಿ ಎದುರಾಗುವ ದ್ವೇಷ ,ಅಸೂಯೆ ,ಕೋಪ,ಸಂಕುಚಿತ ಬುದ್ಧಿ ,ಈ ಎಲ್ಲದಕ್ಕೂ "ಕ್ಷಾಂತಿ"ಯು ಮದ್ದಾಗ ಬಲ್ಲದು. ನಮ್ಮೆಲ್ಲಾ ಸಮಸ್ಯೆಗಳ ಮೂಲ ಕಾರಣಕ್ಕೆ ಪರಿಹಾರ ಆಗ ಬಲ್ಲದು. ಪೂರ್ಣ ಲೇಖನವನ್ನು ತಪ್ಪದೇ ಓದಿ. ಕ್ಷಾಂತಿ ಎಂಬ ದಿವ್ಯ ಗುಣ ನಮ್ಮೆಲ್ಲರ ಆತ್ಮಕ್ಕೆ ಹೆಚ್ಚಿನ ಕಾಂತಿಯನ್ನು ನೀಡಲಿ.ಎಲ್ಲರಿಗೂ ನಮಸ್ಕಾರ.

Saturday, June 8, 2013

"ಒಂದಿಂಚು ಉದ್ದದ ಬೋಲ್ಟು ....!!!!"

ಒಂದಿಂಚು ಉದ್ದದ ಬೋಲ್ಟನ್ನು ನೋಡಿದರೆ ನಿಮಗೇನಾದರೂ ಗಾಭರಿ ಆಗುತ್ತದೆಯೇ ?

ಇದೆಂತಹ ಪ್ರಶ್ನೆ ಎಂದು ನಗಬೇಡಿ.

ನಾನಂತೂ ಹೌಹಾರಿದ್ದೆ !!!!

 ಆದದ್ದು ಇಷ್ಟು .ಒಂದು ವರ್ಷದ ಮಗುವೊಂದು  ಒಂದಿಂಚು ಉದ್ದದ ಬೋಲ್ಟ್ ಒಂದನ್ನು ನುಂಗಿದೆ

ಎಂದು ಅದರ ತಂದೆ ತಾಯಿ ಹೇಳಿದಾಗ ,ಮೊದಲು ನಾನು ನಂಬಿರಲಿಲ್ಲ. ನಂತರ ಮಗುವಿನ ಹೊಟ್ಟೆಯ ಎಕ್ಸ್ ರೇ

ತೆಗಿಸಿ ನೋಡಿದಾಗ ಒಂದಿಂಚಿನ ಬೋಲ್ಟು  ಮಗುವಿನ ಹೊಟ್ಟೆಯೊಳಗೆ ಅಡ್ಡಡ್ಡ ಮಲಗಿತ್ತು !!!

ಮಗು ಏನೂ ಅರಿಯದೆ ಕಿಲ ಕಿಲ ನಗುತ್ತಿತ್ತು !!!!!

ಮಗುವಿನ ತಂದೆ ತಾಯಿಯ ಮುಖದಲ್ಲಿ ಮುಂದೇನೋ ?!!ಎನ್ನುವ ಚಿಂತೆಯ ಕಾರ್ಮೋಡ.

ಆಗಲೇ ನಾನು ಹೌಹಾರಿದ್ದು. ಏನು ಮಾಡೋದು ......,ನನಗಾದ ಗಾಭರಿ ಅವರಿಗೆ ತೋರುವಂತಿಲ್ಲ !!!

"ಸಾರ್ ಬೋಲ್ಟ್ ಎಲ್ಲಾದರೂ ಸಿಕ್ಕಿ ಹಾಕಿ ಕೊಳ್ಳ ಬಹುದಾ? ಕರುಳನ್ನು ಕೊರೆದು ತೂತು ಮಾಡುವ ಚಾನ್ಸ್ ಇದೆಯಾ?"

ಸಹಜವಾಗಿ,ಅವರ ಗಾಭರಿ ಅವರಿಗೆ.

ಅವರೆಲ್ಲಾ ಪ್ರಶ್ನೆಗಳಿಗೆ ಸಮಾಧಾನವಾಗಿ ಉತ್ತರಿಸುವ ಅನಿವಾರ್ಯ ನನ್ನದು !!!

"ಏನೂ ಗಾಭರಿಯಾಗಬೇಡಿ. ಏನೂ ಆಗುವುದಿಲ್ಲಾ.ನಾಳೆಯೋ,ನಾಡಿದ್ದೋ ಮಲದಲ್ಲಿ ಖಂಡಿತಾ ಹೊರಬರುತ್ತೆ.

ಆದರೂ ಕಾಡಿನ ಮಧ್ಯದ ಈ ಊರಿನಲ್ಲಿ ರಾತ್ರಿಯೇನಾದರೂ ತೊಂದರೆಯಾದರೆ ,ಆಗ ಮಗುವನ್ನು  ದೊಡ್ಡ ಆಸ್ಪತ್ರೆಗೆ

ಚಿಕೆತ್ಸೆಗೆ ಕರೆದೊಯ್ಯುವುದು ಕಷ್ಟ. ಹೇಗಿದ್ದರೂ ಈಗ ಮಗು ಆರಾಮವಾಗಿದೆ.ಮಗುವನ್ನು ತಕ್ಷಣ ತುರ್ತು ಚಿಕಿತ್ಸೆ

ಲಭ್ಯ ವಿರುವ ಆಸ್ಪತ್ರೆಯಲ್ಲೇ ಅಡ್ಮಿಟ್ ಮಾಡಿ ,ಎರಡು ದಿನ ನಿಗಾ ವಹಿಸುವು ಒಳಿತು " ಎಂದೆ. ಅವರಿಗೂ ಅದು ಸರಿ

ಎನಿಸಿತು. ಶಿವಮೊಗ್ಗದ  ಹೆಸರಾಂತ ಅಸ್ಪತ್ರೆಯೊಂದಕ್ಕೆ,ಮಗುವನ್ನು ಕಳಿಸಿ ಕೊಟ್ಟೆ .

ಎರಡು ದಿನದ ನಂತರ ಮಗುವಿನ ತಂದೆಯಿಂದ ಫೋನ್  ಬಂತು.

"ಸಾರ್ ಬೋಲ್ಟ್ ಹೊರ ಬಂತು!!!" ಅವನ ದನಿಯಲ್ಲಿ ಎಂತಹ ನಿರಾಳ!!!!

ನಾನೂ ನಿರಾಳವಾಗಿ ಉಸಿರಾಡಿದೆ !!!