Tuesday, November 13, 2012

"ಡೌವ್ ಸೋಪ್ ಹಾಕಿ!!!"

ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು.ಸದಾ ನಗುಮುಖ.ಮೇಲೆ ಸ್ಪುರದ್ರೂಪಿ.ಸ್ವಾಭಾವಿಕವಾಗಿ ಅವರ ಬಳಿ  ತರುಣಿಯರೇ ಹೆಚ್ಚು ಬರುತ್ತಿದ್ದರು.ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ ಆಸ್ಪತ್ರೆಗೆ ಬಂದರು."ಏನಮ್ಮಾ ಏನು ತೊಂದರೆ ?'ಎಂದರು ಡಾಕ್ಟರು.ಹುಡುಗಿಯರು,ಏನೋ ಒಂದು ಕೇಳೋಣವೆಂದುಕೊಂಡು  "ಮೊಡವೆಗೆ ಯಾವ ಸೋಪು ಹಾಕಬೇಕು ಹಾಕಬೇಕು ಸಾರ್?"ಎಂದು ನುಲಿಯುತ್ತಾ ಕೇಳಿದರು.ನಮ್ಮ ಚೆಂದದ ಡಾಕ್ಟರು ಸ್ವಾಭಾವಿಕವಾಗಿ"ಡೌವ್ ಹಾಕಿ"ಎಂದರು.ಹುಡುಗಿಯರು ಕಿಸಿ,ಕಿಸಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು.ಇವರಿಗೆ ಡೌವ್ ಸೋಪನ್ನು ಹಾಕಿ ಎಂದು ಹೇಳಿದ್ದಕ್ಕೆ ಹಾಗೇಕೆ ನಗುತ್ತಾ ಓಡಿಹೋದರೆಂಬುದು ಅರ್ಥವಾಗದೇ ನನ್ನ ಛೇಂಬರಿಗೆ ಬಂದು,ನಡೆದದ್ದೆನ್ನೆಲ್ಲಾ ತಿಳಿಸಿ "ಹುಡುಗಿಯರು ಹಾಗೇಕೆ ನಗುತ್ತಾ ಓಡಿ  ಹೋದರು ಸಾರ್"ಎಂದರು.ನಾನು 'ಡೌವ್ ಹಾಕುವುದು'ಎನ್ನುವುದರ ಅರ್ಥವನ್ನು ಹೇಳಿದ ಮೇಲೆ"ಅಯ್ಯೋ ರಾಮ"ಎನ್ನುತ್ತಾ,ಆದ ಎಡವಟ್ಟಿಗೆ  ಡಾಕ್ಟ್ರು ನಾಚಿಕೆಯಿಂದ ಇನ್ನಷ್ಟು ಕೆಂಪಾದರು.ಈಗ ಅವರಿಗೆ ಮದುವೆಯಾಗಿ ಏಳು ವರ್ಷದ ಮಗನಿದ್ದಾನೆ.ಹೆಂಡತಿಯೂ ವೈದ್ಯೆ.ಹೋದವಾರ ಬೆಂಗಳೂರಿನಲ್ಲಿ ಮನೆಯವರೆಲ್ಲಾ ಸೇರಿದಾಗ ಈ ಘಟನೆಯನ್ನು ನೆನಪಿಸಿಕೊಂಡು,ಅವರನ್ನು ಛೇಡಿಸುತ್ತಾ , ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

Wednesday, November 7, 2012

"ಆನಂದ ನಿಮ್ಮೊಳಗೇ ಇದೆ !!!!"

"ನಾನು ಆನಂದದಿಂದ ಇರಬೇಕು ಎಂಬ ನಿಮ್ಮ ಅಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರದ ಗ್ರಂಥಗಳು ಅಥವಾ ಧರ್ಮದಿಂದ ಆದದ್ದಲ್ಲ.ನಾನು ಆನಂದದಿಂದ ಇರಬೇಕು ಎಂಬುದೇ ಜೀವನದ ಮೂಲಭೂತ ಅಪೇಕ್ಷೆಯಾಗಿದೆ"



ಬ್ರಹ್ಮಾನಂದ ವೆಂದರೆ ಸೃಷ್ಟಿಯೇ ಆನಂದ .ಆಳವಾದ ಆಂತರ್ಯದ ಅಂಶವು ಸೃಷ್ಟಿಯ  ಮೂಲವಾದ ಆನಂದವೇ ಆಗಿದೆ.ನಾವು ಬ್ರಹ್ಮಾನಂದವೆಂದು ಹೇಳುವಾಗ ಸ್ವಯಂ  ಸೃಷ್ಟಿ ಕರ್ತನನ್ನೇ  ಕುರಿತು ಹೇಳುತ್ತಿರುತ್ತೇವೆ.ಅವನೇ ಆನಂದ ಪೂರ್ಣ ಅಥವಾ ಆನಂದ ಭರಿತ.
ಸೃಷ್ಟಿಯ ಮೂಲ ಬೇರೆಲ್ಲೋ ಕುಳಿತಿಲ್ಲ!ನಿಮ್ಮ ಶರೀರವನ್ನೇ ಅವಲೋಕಿಸಿದಾಗ ,ನೀವು ಜನಿಸಿದ ಕ್ಷಣದಿಂದ ಇಲ್ಲಿಯವರೆಗೂ ಅದೆಷ್ಟು ವೃದ್ಧಿಯಾಗಿದೆ!! ಈ ಬೆಳವಣಿಗೆಯು ಬಾಹ್ಯದ ಹಿಗ್ಗಿಸುವಿಕೆಯಿಂದ ಉಂಟಾದುದಲ್ಲ.ಸೃಷ್ಟಿಕರ್ತನು ನಮ್ಮ ಅಂತರ್ಯದಲ್ಲಿ ನಿರಂತರವಾಗಿ ಕ್ರಿಯಾ ಶೀಲನಾಗಿರುವುದರಿಂದ ಇವೆಲ್ಲವೂ ಸಂಭವಿಸುತ್ತಿದೆ.

ಪ್ರಸ್ತುತದಲ್ಲಿ ಸೃಷ್ಟಿಯ ಮೂಲವು ನಿಮ್ಮ ಆಂತರ್ಯದಲ್ಲೇ ಇದೆ.ಅದೇ ಆನಂದ ಮಯ.ನಿಮ್ಮ ಜೀವನದಲ್ಲಿ ಸೃಷ್ಟಿಯ ಈ ಮೂಲಭೂತ ಶಕ್ತಿಯು ಪ್ರಕಾಶಗೊಂಡರೆ,ಅದು ಹೊರ ಹೊಮ್ಮಲು ನೀವು ಅನುವು ಮಾಡಿ ಕೊಟ್ಟರೆ ಆನಂದವಾಗಿರುವುದೊಂದೇ ನಿಮಗಿರುವ ಮಾರ್ಗ.ನಿಮ್ಮ ಆಂತರ್ಯದ ಸಾರದೊಂದಿಗೆ ನೀವು ಏಕತಾನ ಹೊಂದದೆ ಇರುವುದರಿಂದ ಬೇರೆ ಸ್ಥಿತಿಗಳು ನಿಮ್ಮ ಭಾಗವಾಗಿವೆ.ನೀವು ಅನುಭವಿಸುವ ಇನ್ನೆಲ್ಲಾ ರೀತಿಯ ಸ್ಥಿತಿ ಗಳು ನಿಮ್ಮ ಮನಸ್ಸ್ಸು ನಿಮ್ಮ ನಿಯಂತ್ರಣ ಮೀರಿದುದರಿಂದ ಉಂಟಾದವುಗಳಾಗಿವೆ.

ಜೀವನದಲ್ಲಿ ಕ್ಲೇಶಗಳು ಉಂಟಾಗುವುದು ಯಾವುದೇ ಬಾಹ್ಯ ಸನ್ನಿವೇಶ ಗಳಿಂದಾಗಲೀ ,ಯಾವುದೇ ವ್ಯಕ್ತಿಗಳಿಂದಾಗಲೀ ಅಲ್ಲವೆಂಬುದನ್ನು ನಾವು ಅರಿತಿಲ್ಲ.ಬಾಹ್ಯ ಸನ್ನಿವೇಶಗಳು ಶಾರೀರಿಕ ನೋವನ್ನು ಉಂಟು ಮಾಡಬಹುದು.ಆದರೆ ಮಾನಸಿಕ ನರಳಾಟ ಹಾಗೂ ದುಃಖಗಳು ನಿಮ್ಮ ಅಂಕೆ ಮೀರಿದ ಮನಸ್ಸಿನಿಂದಾದದ್ದು.

"ನಾನು ಆನಂದ ದಿಂದ ಇರಬೇಕು" ಎಂಬ ನಿಮ್ಮ ಆಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರ,ಗ್ರಂಥಗಳು,ಅಥವಾ ಧರ್ಮದಿಂದ ಆದದ್ದಲ್ಲ."ನಾನು ಆನಂದದಿಂದ ಇರಬೇಕು "ಎನ್ನುವುದೇ ಜೀವನದ ಅಪೇಕ್ಷೆಯಾಗಿದೆ.ನಿಮ್ಮೊಳಗಿರುವ ಚೈತನ್ಯವು ಆನಂದವನ್ನು ಆಶಿಸುತ್ತದೆ.ಏಕೆಂದರೆ ನಿಮ್ಮೊಳಗಿರುವ ಸೃಷ್ಟಿಯ ಮೂಲ ಭೂತ ಉಗಮದ ಪ್ರಕೃತಿ ಸ್ವಭಾವವೇ ಆನಂದವಾಗಿದೆ.


(ಸದ್ಗುರು ಜಗ್ಗಿ ವಾಸುದೇವ್ ಅವರ "ಅನುದಿನದ ಆನಂದ "ಎಂಬ ಪುಸ್ತಕದಿಂದ ಆಯ್ದ ಭಾಗ)




Tuesday, November 6, 2012

"ಆತ್ಮ ಪ್ರಶಂಶೆ ಒಳ್ಳೆಯದಲ್ಲ"

ನಮ್ಮಲ್ಲಿ ಹಲವಾರು ಮಂದಿಗೆ ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ಒಂದು ಚಟವಾಗಿದೆ.ಇಂತಹ ಚಟವೊಂದು ತಮಗಿದೆ,ಅದರಿಂದ ಬೇರೆಯವರಿಗೆ ಕಿರಿ ಕಿರಿಯಾಗುತ್ತಿದೆ ಎನ್ನುವ ಅರಿವೂ ಅವರಿಗಿರುವುದಿಲ್ಲ.ಆತ್ಮ ಪ್ರಶಂಶೆ,ಆತ್ಮ ಹತ್ಯೆಗೆ ಸಮ ಎನ್ನುತ್ತದೆ ಮಹಾಭಾರತದ ಈ ಕಥೆ.ಕುರುಕ್ಷೇತ್ರದ ಪ್ರಮುಖ ಘಟ್ಟದಲ್ಲಿ ಅರ್ಜುನನಿಲ್ಲದೆ, ಅಭಿಮನ್ಯುವನ್ನು ಕಳೆದುಕೊಳ್ಳಬೇಕಾಯಿತು.ನೊಂದ ಯುಧಿಷ್ಟಿರ,ಅರ್ಜುನನಿಗೆ 'ಮಗನನ್ನು ರಕ್ಷಿಸದ ನಿನ್ನ ಗಾಂಡೀವಕ್ಕೆ ಧಿಕ್ಕಾರ'ಎಂದು ಬಿಟ್ಟ.ಅರ್ಜುನನಾದರೋ ತನ್ನ ಪರಮ ಪ್ರೀತಿಯ ಗಾಂಡೀವವನ್ನು ಹೀಯಾಳಿಸಿದವರನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಎಂದೋ ಪ್ರತಿಜ್ಞೆ ಮಾಡಿದ್ದ .ಇದಕ್ಕೆ ಕೃಷ್ಣ ಅರ್ಜುನನಿಗೆ ಒಂದು ಉಪಾಯ ಸೂಚಿಸಿದ.ಧರ್ಮಜನ ನಿಂದನೆ ಮಾಡು ,ಇದರಿಂದ ಅವನನ್ನು ಕೊಂದಂತೆ ಆಗುತ್ತದೆ ಎಂದ.ಜೀವ ತೆಗೆಯುವುದಕ್ಕಿಂತ ಇದು ಉತ್ತಮವೆಂದು ಅರ್ಜುನ ಒಲ್ಲದ ಮನಸ್ಸಿನಿಂದ ಅಣ್ಣನ ನಿಂದನೆ ಮಾಡಿದ.ಧರ್ಮರಾಯನಂತಹ ಅಣ್ಣನನ್ನು ನಿಂದನೆ ಮಾಡಬೇಕಾಯಿತಲ್ಲ ಎಂದು ಅರ್ಜುನ ನೊಂದು,ಆತ್ಮ ಹತ್ಯೆಗೆ ಸಿದ್ಧನಾದ.ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತೆ  ಕೃಷ್ಣ ಬರ ಬೇಕಾಯಿತು.ಅರ್ಜುನನಿಗೆ 'ನಿನ್ನನ್ನು ನೀನೇ ಹೊಗಳಿಕೋ.ಇದು ಅತ್ಮಹತ್ಯೆಗಿಂತ ಕಟುವಾದ ಶಿಕ್ಷೆ 'ಎಂದು ಸೂಚಿಸಿದ.ಅದರಂತೆ ಅರ್ಜುನ ತನ್ನನ್ನು ತಾನೇ ಹೊಗಳಿಕೊಂಡು ಸಧ್ಯದ ಸಂಕಷ್ಟದಿಂದ ಪಾರಾದ.ಪರನಿಂದೆ ಕೊಲೆಗೂ,ಆತ್ಮ ಪ್ರಶಂಶೆ ಆತ್ಮ ಹತ್ಯೆಗೂ ಸಮವೆಂಬುದು ಇದರ ಸಾರಾಂಶ.ಇನ್ನಾದರೂ ನಾವು ಪರ ನಿಂದನೆ ಮತ್ತು ಆತ್ಮ ಪ್ರಶಂಶೆಗಳಿಂದ ದೂರವಿರೋಣವೆ?ನಮಸ್ಕಾರ.
(ನವೆಂಬರ್ ೩,ಶನಿವಾರ ವಿಜಯಕರ್ನಾಟಕ ,ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.ಲೇಖಕರು;ಸ್ವಾಮಿ ಆನಂದ ಪೂರ್ಣ.)